ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣವೂ ಆಗಿರುವ
ಕೆಆರ್ಎಸ್ ಬೃಂದಾವನದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದು ಸ್ಥಳೀಯರು, ನೌಕರರು ಹಾಗೂ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ.
ಈ ಹಿಂದೆ ಬೃಂದಾವನ ದ ಉತ್ತರ ಬಾಗಿಲಿನಲ್ಲೂ ಕಾಣಿಸಿಕೊಂಡಿತ್ತು.
ಈಗ ಬೃಂದಾವನದ ದಕ್ಷಿಣ ದ್ವಾರದ ಬಳಿ ಚಿರತೆ ಹಾದುಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೊಲೀಸರು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಚಿರತೆ ಸಂಚಾರದ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೇಬಿಬೆಟ್ಟ, ಕನ್ನಂಬಾಡಿ ಹಾಗೂ ನಾರ್ಥ್ ಬ್ಯಾಂಕ್ ಕಡೆಗಳ ಅರಣ್ಯ ಪ್ರದೇಶದಿಂದ ಚಿರತೆ ಈ ಭಾಗಕ್ಕೆ ಬಂದರುವ ಶಂಕೆ ವ್ಯಕ್ತವಾಗಿದೆ.
ಕೆಆರ್ಎಸ್ ಬೃಂದಾವನದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾದರೆ ಬೋನು ಇರಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸುನೀತಾ ತಿಳಿಸಿದ್ದಾರೆ.
ಮಹದೇವಪುರ, ನೇರಲಕೆರೆ ಗ್ರಾಮಗಳ ಬಳಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ ಎಂದು ಸುನೀತಾ ಮಾಹಿತಿ ನೀಡಿದ್ದಾರೆ.