ಕೇಂದ್ರ ಸರ್ಕಾರಿ ನೌಕರರಿಗೆ ನಗದು ವೋಚರ್: ಕೇಂದ್ರದ ಹೊಸ ಯೋಜನೆ

Team Newsnap
1 Min Read

ಕೊರೋನಾ ಕಾರಣದಿಂದ, ನೋಟು ಬ್ಯಾನ್ ಹಾಗೂ ಜಿಎಸ್‌ಟಿಯ ಅಸಮರ್ಪಕ ನಿರ್ವಹಣೆಯಿಂದ ದೇಶದಲ್ಲಿ ಅರ್ಥಿಕ ಚಟುವಟಿಕೆಗಳು ದಿನೇ ದಿನೇ ಕುಸಿಯುತ್ತಿವೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ.

ಸೋಮವಾರ ನಡೆದ ಜಿಎಸ್‌ಟಿ ಭರ್ತಿ ಮಾಡುವ ಕುರಿತ ಸಭೆಯಲ್ಲಿ ಎಲ್ಲ ರಾಜ್ಯಗಳು ಒಮ್ಮತದ ತೀರ್ಮಾನಕ್ಕೆ ಬಂದಿಲ್ಲ. ಈಗಾಗಲೇ ದೇಶದ 21 ರಾಜ್ಯಗಳು ಸಾಲ ಕೋರಿವೆ. ಒಟ್ಟು ಮೂರು ಬಾರಿ ಜಿಎಸ್‌ಟಿ ಭರ್ತಿ ಕುರಿತ ಸಭೆ ನಡೆಸಲಾಗಿದೆ. ಪರಿಸ್ಥಿತಿಯ ಪ್ರತಿಕೂಲ ಪರಿಣಾಮವಾಗಿ ಕೇಂದ್ರ ಈ ಬಾರಿ ಸಾಲ ಮಾಡುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಪ್ರವಾಸಿ ಭತ್ಯೆಯ ಬದಲು ಜಿಎಸ್‌ಟಿ ಅಡಿಯಲ್ಲಿ‌ ನೊಂದಾಯಿತವಾದ ವ್ಯಾಪಾರಿಗಳಿಂದ ವಸ್ತುಗಳನ್ನು‌ ಹಾಗೂ ಸೇವೆಗಳನ್ನು ಪಡೆಯಲು ನಗದು ವೋಚರ್‌ಗಳನ್ನು ನೀಡುವುದು. ಸರ್ಕಾರ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಕೈಗೊಂಡಿರುವ ಕ್ರಮಗಳಲ್ಲಿ ಒಂದು.

ಸಾಮಾನ್ಯ ಗ್ರಾಹಕ ಬಳಕೆಯ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಹೆಚ್ಚಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ರೀತಿಯಲ್ಲಿ ಸರ್ಕಾರಿ ನೌಕರರು ಜಿಎಸ್‌ಟಿ ನೊಂದಾಯಿತ ವ್ಯಾಪಾರಿಗಳಿಂದ ಸಾಮಾನ್ಯ ಗ್ರಾಹಕ ಬಳಕೆಯ ವಸ್ತು ಹಾಗೂ ಸೇವೆಗಳನ್ನು ಖರೀದಿಸಿದರೆ ಸರಕು ಹಾಗೂ ಸೇವೆಗಳ ಬೇಡಿಕೆ ಹೆಚ್ಚಲಿದೆ. ಈ ಕ್ರಮದಿಂದ ಒಟ್ಟು 73 ಸಾವಿರ ಕೋಟಿ ಮೌಲ್ಯದ ವಸ್ತುಗಳ ಖರೀದಿ ಈ ಬಾರಿ ಆಗಬಹುದು ಎಂಬುದು ಕೇಂದ್ರದ ಲೆಕ್ಕಾಚಾರ.

Share This Article
Leave a comment