ಗುರುವಾರ (ಇಂದು) ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ದಿನವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಬಿಜೆಪಿ ಸಜ್ಜಾಗಿತ್ತು.
ಜನೋತ್ಸವ ಹೆಸರಿನಲ್ಲಿ ಸಾಧನೆಯ ಸಮಾವೇಶವನ್ನು ಮಾಡಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿತ್ತು . ಆದರೆ ಪ್ರವೀಣ್ ನೆಟ್ಟಾರು ಕೊಲೆ ಕಾರಣಕ್ಕಾಗಿ ಬಿಜೆಪಿಯ ಎಲ್ಲಾ ಸಂಭ್ರಮಕ್ಕೂ ಇತಿಶ್ರೀ ಹಾಡಿದೆ.
ಬಿಜೆಪಿಯ ಬೃಹತ್ ಸಮಾವೇಶಕ್ಕೆ ಹಳೇಮೈಸೂರು ಭಾಗ ಸಜ್ಜಾಗಿತ್ತು. ಬೊಮ್ಮಾಯಿ ಒಂದು ವರ್ಷದ ಸಾಧನೆ ಜೊತೆಗೆ ಮೂರು ವರ್ಷಗಳ ಬಿಜೆಪಿ ಸಾಧನೆಗಳನ್ನೆಲ್ಲ ಜನರ ಮುಂದಿಡಲು ಬಿಜೆಪಿ ನಾಯಕರು ಸನ್ನದ್ಧರಾಗಿದ್ದು ಆದರೆ. ಕೇಸರಿ ಪಾಳಯದ ಜನೋತ್ಸವ ಕಾರ್ಯಕ್ರಮಕ್ಕೆ ಪ್ರವೀಣ್ ನೆಟ್ಟಾರು ಹತ್ಯೆಯ ಕರಾಳ ಛಾಯೆ ಬಿದ್ದಿದೆ. ಬಿಜೆಪಿ ಸರ್ಕಾರದ ಸಂಭ್ರಮವನ್ನು ಕಿತ್ತುಕೊಂಡಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಕರಾವಳಿಯನ್ನೇ ಕುದಿಯುವಂತೆ ಮಾಡಿದೆ. ಬಿಜೆಪಿ ಸರ್ಕಾರದ ವಿರುದ್ಧವೇ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಈ ಹೊತ್ತಲ್ಲಿ ಜನೋತ್ಸವ ಕಾರ್ಯಕ್ರಮ ನಡೆಸೋದು ಸೂಕ್ತವಲ್ಲ ಎಂಬುದು ಸಿಎಂ ಬಸವರಾಜ ಬೊಮ್ಮಾಯಿಗೆ ಮನದಟ್ಟಾಗಿದೆ. ಹೀಗಾಗಿ ಇವತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ರದ್ದಾಗಿದೆ.
ಬುಧವರ ತಡರಾತ್ರಿ 12.30 ರ ವೇಳೆಗೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಅಲ್ಲದೇ ಇವತ್ತು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಬೇಕಿದ್ದ ಸಾಧನಾ ಕಿರುಹೊತ್ತಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನೂ ಸಿಎಂ ರದ್ದುಗೊಳಿಸಿದ್ದಾರೆ.
ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಕೂಡಾ ಸಿದ್ಧವಾಗಿತ್ತು. ಸಚಿವರಾದ ಡಾ. ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಮುಂದಾಳತ್ವ ವಹಿಸಿ ವೇದಿಕೆ ಸಜ್ಜು ಮಾಡಿದ್ದರು. ಹೀಗಾಗಿ ಸಿಎಂ ಜನರು ಮತ್ತು ತಮ್ಮ ಸಚಿವರಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಪ್ರವೀಣ್ ಹತ್ಯೆಯನ್ನು ಖಂಡಿಸಿದ್ದಾರೆ.
ಇನ್ನೂ ಜನೋತ್ಸವಕ್ಕೆ ಬರುವ ಕಾರ್ಯಕರ್ತರ ಉಪಹಾರಕ್ಕಾಗಿ ಪಲಾವ್ ಸಿದ್ದಪಡಿಸಲಾಗಿತ್ತು. ಅಲ್ಲದೇ ಮಧ್ಯಾಹ್ನ 1 ಲಕ್ಷ ಜನರಿಗೆ ಊಟಕ್ಕೆ ತಯಾರಿ ನಡೆಸಿಕೊಳ್ಳಲಾಗಿತ್ತು. ಕಾರ್ಯಕ್ರಮ ರದ್ದಾದ ಹಿನ್ನಲೆ ಜನೋತ್ಸವ ಕಾರ್ಯಕ್ರಮಕ್ಕಾಗಿ ಮಾಡಿರುವ ಆಹಾರ ವ್ಯರ್ಥವಾಗುವ ಸಾಧ್ಯತೆ ಇದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು