ತುಮಕೂರು ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ

Team Newsnap
2 Min Read

ತುಮಕೂರು

ಹೆಚ್ಚುತುಂಬೆ ಹೂ ಬೆಳೆದ ಕಾರಣ ಇದು ತುಮ್ಮೆಗೂರು
ತುಮ್ಮೆಗೂರಿಂದ ಮುಂದೆ ಇದೇ ಆಯ್ತು ತುಮಕೂರು
ಕರ್ನಾಟಕದಲ್ಲೇ ಅತಿ ಹೆಚ್ಚು ಕೆಂಪು ಮಣ್ಣಿನ ಜಿಲ್ಲೆ ಇದು
ಕರ್ನಾಟಕದಲ್ಲೇ ಹೆಚ್ಚು ರಾಗಿ ಬೆಳೆಯುವ ಜಿಲ್ಲೆಯಿದು

ರಾಗಿ ನೆಲಗಡಲೆ ಭತ್ತ ಮುಸುಕಿನ ಜೋಳ ತೊಗರಿ
ಎಣ್ಣೆ ಕಾಳುಗಳು ತೆಂಗು ಅಡಿಕೆ ಇತರೆ ಬೆಳೆಗಳು
ಅತಿ ಹೆಚ್ಚು ತೆಂಗು ಬೆಳೆವ ಕಲ್ಪತರು ನಾಡೆಂದು ಹೆಸರು
ಕರ್ನಾಟಕದ ಮೊಟ್ಟ ಮೊದಲ ಫುಡ್ ಪಾರ್ಕ್ ಇಲ್ಲಿದೆ

ಹತ್ತು ತಾಲ್ಲೂಕುಗಳ ಜಿಲ್ಲೆ ಇದು ಗುಬ್ಬಿ ತಿಪಟೂರು
ತುರುವೇಕೆರೆ ಮಧುಗಿರಿ ಪಾವಗಡ ತುಮಕೂರು
ಶಿರಾ ಕುಣಿಗಲ್ ಚಿಕ್ಕನಾಯಕನಹಳ್ಳಿ ಕೊರಟಗೆರೆ
ಕರ್ನಾಟಕದಲ್ಲೇ ಹೆಚ್ಚು ಜಿಲ್ಲಾ ಹೆದ್ದಾರಿಯ ಹೆಗ್ಗಳಿಕೆ

ಹೊಯ್ಸಳ ಸಾತವಾಹನ ಗಂಗ ಕದಂಬ ಚಾಲುಕ್ಯರು
ನೊಳಂಬ ರಾಷ್ಟ್ರಕೂಟರು ವಿಜಯನಗರದರಸರು
ಮೊಗಲರು ಮರಾಠರು ಮೈಸೂರ ಅರಸರು ಆಳಿದರು
ನಾಡ ಪ್ರಭು ಕೆಂಪೇಗೌಡರೂ ಸಹ ಇಲ್ಲಿ ಆಳಿದವರು

ಶಿಂಷಾ ಸುವರ್ಣ ಮುಖಿ ಜಯಮಂಗಲಿ ನದಿಗಳು
ಮಾರ್ಕೋನಹಳ್ಳಿ ಹಾಗೂ ಥೀಟಾ ಜಲಾಶಯಗಳು
ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್ ಪಾರ್ಕ್ ಇಲ್ಲಿದೆ
ಎಚ್ ಎ ಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕವಿದೆ

ಚಿಕ್ಕನಾಯಕನಹಳ್ಳಿಯಲ್ಲಿ ಕಬ್ಬಿಣದ ಅದಿರು ಹೊಂದಿದೆ
ಈ ಜಿಲ್ಲೆಯ ಅಜ್ಜನಹಳ್ಳಿಯಲ್ಲಿ ಚಿನ್ನದ ಅದಿರು ಕಂಡಿದೆ
ಚಿಕ್ಕನಾಯಕನಹಳ್ಳಿಯಲ್ಲಿ ಮ್ಯಾಂಗನೀಸ್ ನಿಕ್ಷೇಪವಿದೆ
ಇಂತಹ ಅನೇಕ ನೈಸರ್ಗಿಕ ಸಂಪತ್ತು ಇದು ಹೊಂದಿದೆ

ಭಾರತದ ಪ್ರತಿಷ್ಠಿತ ಧಾರ್ಮಿಕ ಕೇಂದ್ರ ಸಿದ್ಧಗಂಗಾ ಮಠ
ಎರಡು ಶತಮಾನಗಳಿಂದ ಬಂದವರಿಗೆ ಉಚಿತ ಊಟ
ಹತ್ತು ಸಾವಿರ ಮಕ್ಕಳಿಗೆ ಊಟ ವಸತಿ ವಿದ್ಯಾರ್ಜನೆ
ಉಚಿತವಾಗಿ ನಡೆಯುತ್ತಿದೆ ಪ್ರತಿ ದಿನವೂ ಸುಮ್ಮನೆ

ನಡೆದಾಡುವ ದೇವರೆಂದೇ ಕರೆಯುವ ಸತ್ಪುರುಷರು
ಶ್ರೀ ಶ್ರೀ ಶಿವಕುಮಾರ ಮಹಾ ಸಂತರೀ ಸತ್ಪುರುಷರು
ಉತ್ತರದಲ್ಲಿ ನದಿ ಗಂಗಾ ದಕ್ಷಿಣದಲ್ಲಿ ಸಿದ್ಧಗಂಗಾ ಎಂಬ
ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಎಂಬ ಹೆಮ್ಮೆ ತುಮಕೂರು

ಒಂಭತ್ತು ಪುರಾತನ ಕೊಟೆಗಳ ಜಿಲ್ಲೆ ತುಮಕೂರು
ಜಕಣಾಚಾರಿ ಡಂಕಣಾಚಾರಿ ತಂದೆ ಮಗ ಶಿಲ್ಪಿಗಳು
ಕೈದಾಳದ ಚನ್ನಕೇಶವನ ಮುರ್ತಿ ಕೆತ್ತಿದ ಶಿಲ್ಪಿಗಳು
ಜಿಲ್ಲೆ ತುಂಬ ಇವೆ ನೂರಾರು ದೇವಾಲಯಗಳು

ಬರಗೂರು ರಾಮಚಂದ್ರಪ್ಪ ತೀ ನಂ ಶ್ರೀಕಂಠಯ್ಯರು
ಟಿ ಸುನಂದಮ್ಮ ಡಿ ಎನ್ ನರಸಿಂಹಚಾರರು ಇಲ್ಲಿಯ
ಸಾಹಿತಿಗಳು ಗುಬ್ಬಿ ವೀರಣ್ಣ ಉಮಾಶ್ರೀಯವರು
ನಟಜಗ್ಗೇಶ್ ಚಂದ್ರ ಆರ್ಯ ಕೆನಡಸಂಸತ್ತಿನ ಸದಸ್ಯರು

ಗೊರವನಹಳ್ಳಿ ಮಹಾಲಕ್ಷ್ಮಿ ಕೈದಾಳ ಚನ್ನಕೇಶವ
ಗಂಗಾಧರೇಶ್ವರ ಯಡಿಯೂರ ಸಿದ್ಶಲಿಂಗೇಶ್ವರ
ಲಕ್ಷ್ಮಿಕಾಂತ ಸ್ವಾಮಿ ಪಟ್ಟಲದಮ್ಮ ದೇವಾಲಯಗಳು
ದಕ್ಷಿಣದ ಐಹೊಳೆಯೆಂಬ ಹೆಸರಿನ ನಿಟ್ಟೂರು

ಕಲಾವತಿ ಪ್ರಕಾಶ್ ಬೆಂಗಳೂರು (ಜಿಲ್ಲೆ೨೨)

Share This Article
Leave a comment