ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಐಟಿ ಎಂಜಿನಿಯರ್ ವಿಷ್ಣು ತೀರ್ಥ ವಡವಿ (54) ಮಿದುಳು ನಿಷ್ಕ್ರಿಯಗೊಂಡ ಪರಿಣಾಮ ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಿದುಳು ಸಂಬಂಧಿ ಕಾಯಿಲೆಯಿಂದ ವಿಷ್ಣು ತೀರ್ಥ ವಡವಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ಸಾವಿನ ಬಳಿಕ ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.
2001 ರಲ್ಲಿ ಕರ್ನಾಟಕ ಹೈಕೋರ್ಟ್ನ ಮೊದಲ ಐಟಿ ಇಂಜಿನಿಯರ್ ಆಗಿ ವಿಷ್ಣು ತೀರ್ಥ ವಡವಿ ನೇಮಕಗೊಂಡಿದ್ದರು. ಕಳೆದ ಸೆಪ್ಟೆಂಬರ್ 7 ನೇ ತಾರೀಖು ಮಿದುಳು ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ನಿನ್ನೆ ರಾತ್ರಿ ಮಿದುಳು ನಿಷ್ಕ್ರಿಯಗೊಂಡಿತು. ಬಳಿಕ ಅಂಗಾಂಗ ದಾನ ಮಾಡಿ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ.
ವಡವಿ ಅವರ ಎರಡು ಕಣ್ಣು, ಎರಡು ಕಿಡ್ನಿ, ಒಂದು ಹೃದಯ, ಒಂದು ಲಿವರ್ ದಾನ ಮಾಡಲಾಗಿದೆ. ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಇಂದು ಬೆಳಗ್ಗೆ ಜೀವಂತ ಹೃದಯ ರವಾನೆ ಮಾಡಲಾಗಿದೆ.