ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಶೃಂಗೇರಿ ಶಾರದ ಪೀಠಕ್ಕೆ ಆಗಮಿಸಿ ತಾಯಿ ಶಾರದೆಯ ಹಾಗೂ ಉಭಯ ಜಗದ್ಗುರಗಳ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಸಿಎಂ ನಾನು ಸಿಎಂ ಆಗಿ ಇಲ್ಲಿಗೆ ಬಂದಿಲ್ಲ. ಭಕ್ತನಾಗಿ ಬಂದಿದ್ದೇನೆ. ಶೃಂಗೇರಿ ಶಾರದಾಂಬೆ ಹಾಗೂ ಹರಿಹರಪುರ ಮಠದ ಶಾರದಾ ಲಕ್ಷ್ಮಿ ನರಸಿಂಹ ಸ್ವಾಮಿ ದೇವರಿಂದ ರಾಜ್ಯವನ್ನು ಮುನ್ನಡೆಸುವ ಹೊಸ ಪ್ರೇರಣೆ ಪಡೆದುಕೊಂಡು ಹೋಗುತ್ತಿದ್ದೇನೆ ಎಂದರು.
ಸಮಾಜ ಆದರ್ಶವಾಗಿ ಇರಬೇಕಾದರೆ ದೈವ ಭಕ್ತಿ, ಗುರುಭಕ್ತಿ ಹಾಗೂ ಆತ್ಮವಿಶ್ವಾಸ ಇರಬೇಕು. ಅದು ಬಹಳ ಮುಖ್ಯ. ಉತ್ಕ್ರಷ್ಟವಾದ ಪ್ರೀತಿಯೇ ಪವಿತ್ರ ಭಕ್ತಿ ಎಂದರು.
ಗುರುವಿನ ಬಳಿ ಭಕ್ತಿಯಲ್ಲಿ ಕರಗಿ ಲೀನವಾಗಬೇಕು. ನಾನು ಎಂಬ ಅಸ್ತಿತ್ವವನ್ನು ವಿಸರ್ಜನೆ ಮಾಡಬೇಕು. ನಾನು ಎಂಬುದು ನಿಸರ್ಗದ ಸಣ್ಣ ಕಣ. ಯಾರೂ ಕೂಡ ಸರ್ವ ಸ್ವತಂತ್ರರಾಗಿ ಹುಟ್ಟಲ್ಲ. ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಗುರು ಎಲ್ಲರ ಸಹಾಯದಲ್ಲಿ ಬೆಳೆಯುತ್ತಿದ್ದೇವೆ, ಇದು ನಮ್ಮ ಅಕೌಂಟ್ನಲ್ಲಿ ಕ್ರೆಡಿಟ್ ಆಗಿರುತ್ತದೆ.
ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ. ವರ್ಕ್ ಇಸ್ ವರ್ಶಿಪ್. ನ್ಯಾಯ-ನೀತಿಯ ಸಮಾಜ ಸ್ಥಾಪನೆ ಆಗಬೇಕು. ಶಂಕರಾಚಾರ್ಯರ ವಿಚಾರ, ಆಚಾರ-ತತ್ವಗಳನ್ನು ಅರ್ಥ ಮಾಡಿಕೊಂಡು, ಬದುಕಿನಲ್ಲಿ ಕಿಂಚಿತ್ತು ಅಳವಡಿಸಿಕೊಂಡಲ್ಲಿ ಸಮಾಜ ಸುಧಾರಣೆ ಆಗುತ್ತದೆ ಎಂದರು.