ಭಾರತೀಯ ಜನತಾ ಪಕ್ಷವು ಯಾವುದೇ ಗೂಂಡಾ ರಾಜಕೀಯ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಶುಕ್ರವಾರ ಉದ್ಘಾಟಿಸಿ ಶೆಟ್ಟರ್ ಮಾತನಾಡಿ, ತಮ್ಮ ಅಭ್ಯರ್ಥಿಗಳಿಗೆ ಧಮ್ಕಿ ಹಾಕಲಾಗಿದೆ ಎಂಬ ಎಎಪಿ ಆರೋಪಕ್ಕೆ ಶೆಟ್ಟರ್ ಪ್ರತಿಕ್ರಿಯಿಸಿ, ಆ ಪಕ್ಷದವರು ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದರು.
ಪಾಲಿಕೆಯಲ್ಲಿ ಮೂರನೇ ಬಾರಿಗೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ೬೦ಕ್ಕೂ ಹೆಚ್ಚು ಸ್ಥಾನಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.
ಪದವೀಧರ, ಎಂಕಾಂ ಎಂಬಿಬಿಎಸ್ ಓದಿದವರು ಹಾಗೂ ವಿದ್ಯಾವಂತರಿಗೆ ಪಕ್ಷವು ಟಿಕೆಟ್ ನೀಡಿದೆ. ಮಾದರಿ ನಗರ ಮಾಡಲು ಪಕ್ಷವು ಪಣತೊಟ್ಟಿದೆ ಎಂದು ತಿಳಿಸಿದರು.
ಚುನಾವಣಾ ಪ್ರಚಾರದಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಪಾಲ್ಗೊಳ್ಳದ ಬಗ್ಗೆ ಪ್ರತಿಕ್ರಿಯೆ ನೀಡಲು ಶೆಟ್ಟರ್ ನಿರಾಕರಿಸಿದರು.