ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿದರು.
ಕಾಂಗ್ರೆಸ್ ಬಿಡುಗಡೆಗೊಳಿಸಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವಂತೆ ಸೂಚಿಸಿತ್ತು. ಈ ಪ್ರಣಾಳಿಕೆಯನ್ನು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ವಿರೋಧಿಸಿದ್ದಾರೆ.
ರೋಡ್ ಶೋ ಮಾರ್ಗದಲ್ಲಿ ಜನರು ಕಿಕ್ಕಿರಿದು ನಿಂತಿದ್ದರು. ಜೈ ಮೋದಿ ಜೈ ಮೋದಿ ಎಂಬ ಘೋಷಣೆ ಮೊಳಗಿದೆ. ಪ್ರಧಾನಿ ಮೋದಿ ಸಾಗುವ ರಸ್ತೆಯುದ್ದಕ್ಕೂ ಹೂವಿನ ಮಳೆ ಸುರಿಸಲಾಗಿದೆ.
ಮೋದಿ ರೋಡ್ ಶೋನಲ್ಲಿ ಹನುಮಂತನ ಮುಖವಾಡಗಳು ಜನರ ಗಮನ ಸೆಳೆಯಿತು. ಬಜರಂಗದಳವನ್ನು ನಿಷೇಧಿಸುವಂತೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ವಿರೋಧಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಪ್ರಧಾನಿ ಬೆಂಬಲಿಗರು ಹನುಮಂತನ ಮುಖವಾಡಗಳನ್ನು ಧರಿಸಿದ್ದರು.
ಅಷ್ಟೇ ಅಲ್ಲದೇ ಬಿಜೆಪಿ ಬಾವುಟದ ಜೊತೆಗೆ ಬಜರಂಗಿ ಬಾವುಟವು ಕಂಡುಬಂತು. ಜೊತೆಗೆ ನರೇಂದ್ರ ಮೋದಿ ಅವರು ಆಂಜನೇಯನಿಗೆ ನಮಸ್ಕರಿಸಿದ್ದು ವಿಶೇಷವಾಗಿತ್ತು.
ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂನಲ್ಲಿ ಅಂತ್ಯಗೊಂಡಿದೆ. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ರೋಡ್ ಶೋ ನಡೆಸಿದರು. ಬೆಂಗಳೂರಿನ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಇಷ್ಟೊಂದು ದೊಡ್ಡ ರೋಡ್ ಶೋ ನಡೆಸಿರುವುದು ಇದೇ ಮೊದಲು.
ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟರು. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು.