ಬೆಳಗಾವಿ ಲೋಕಸಭಾ ಚುನಾವಣೆ; ಬಿಜೆಪಿ ಉಸ್ತುವಾರಿಯಿಂದ ರಮೇಶ್ ಜಾರಕಿಹೊಳಿ ಕೊಕ್ ?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸ್ಫೋಟದ ನಂತರ ತೀವ್ರ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ ಬೆಳಗಾವಿ ಲೋಕಸಭಾ ಉಪ ಚುನಾವಣೆ ಉಸ್ತುವಾರಿ ಜವಾಬ್ದಾರಿ ಯಿಂದ ರಮೇಶ್ ಜಾರಕಿಹೊಳಿ ಅವರನ್ನು ಹೊರಗೆ ಇಡುವ ಸಾಧ್ಯತೆ ಇದೆ.
ಚುನಾವಣಾ ದಿನಾಂಕ ಘೋಷಣೆ ಆದ ಬಿಜೆಪಿಗೆ ಸಿಡಿ ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ರಮೇಶ್ ಜಾರಕಿಹೊಳಿಗೆ ಚುನಾವಣಾ ಉಸ್ತುವಾರಿಯಿಂದ ಕೊಕ್ ನೀಡುವ ಸಾಧ್ಯತೆಗಳು ಗಂಭೀರ ಪರಿಣಾಮ ಬೀರುವ ಸಾಧ್ಯತೆ.
ಲೋಕಸಭಾ ಉಪಚುನಾವಣೆಗೆ ಪರ್ಯಾಯ ನಾಯಕತ್ವ ಹುಡುಕಾಟದಲ್ಲಿ ಬಿಜೆಪಿ ತೊಡಗಿದೆ. ಕಾಂಗ್ರೆಸ್ ಸಿಡಿ ಪ್ರಕರಣವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪ್ರಚಾರದ ವೇಳೆ ಬಿಜೆಪಿ ಹಣಿಯಲು ಸಿದ್ಧತೆ ನಡೆಸಿದೆ.
ಚುನಾವಣೆ ಉಸ್ತುವಾರಿ ಬದಲಾವಣೆಗೆ ಬಿಜೆಪಿ ಮುಂದಾಗಿದೆ. ಡಿಸಿಎಂ ಲಕ್ಷ್ಮಣ ಸವದಿ, ಉಮೇಶ್ ಕತ್ತಿ ಅಥವಾ ಸಿಎಂ ಪುತ್ರ ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿದೆ.
ಆದರೆ ಹಲವರು ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಚುನಾವಣಾ ಉಸ್ತುವಾರಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರು ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ಈಗ ಲೋಕಸಭಾ ಉಪಚುನಾವಣೆ ವೇಳೆ ಅವರನ್ನು ಕೈಬಿಟ್ಟರೆ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಬಾಲಚಂದ್ರ ಜಾರಕಿಹೊಳಿಗೆ ಉಸ್ತುವಾರಿ ನೀಡುವಂತೆ ಹಲವರು ಸಲಹೆ ನೀಡಿದ್ದಾರೆ. ಈಗಿನ ಬೆಳವಣಿಗೆ ಗಮನಿಸಿಕೊಂಡು ಬಿಜೆಪಿ ಮುಂದಿನ ನಿರ್ಧಾರ ಮಾಡಲಿದೆ.