ಕೋವಿಡ್ ಎರಡನೇ ಅಲೆಯಿಂದಾಗಿ ಉಡುಪಿಯ ಶ್ರೀಕೃಷ್ಣಮಠದಲ್ಲಿ ಸ್ಧಗಿತಗೊಂಡಿದ್ದ ಸಾರ್ವಜನಿಕ ಅನ್ನದಾಸೋಹ ಈಗ ಪುನರಾರಂಭಗೊಂಡಿದೆ.
ಕೊರೊನಾ ಪಾಸಿಟಿವಿಟಿದರ ಇಳಿಕೆಯಾಗಿರುವುದರಿಂದ ಮಠದಲ್ಲಿ ಮತ್ತೆ ಭಕ್ತರಿಗೆ ಪ್ರಸಾದ ನೀಡುವ ಕಾಯಕ ಆರಂಭವಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದ ನೀಡುವಂತೆ ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಸ್ವಾಮೀಜಿ ಸೂಚನೆ ನೀಡಿದ್ದಾರೆ ಎಂದು ಮಠದ ಮೂಲಗಳು ಹೇಳಿವೆ.
ಇದೇ ಸಂದರ್ಭದಲ್ಲಿ ರಾಘವೇಂದ್ರ ಮತ್ತು ಅನಿತಾ ಎಂಬುವರು ತಮ್ಮ ಮಗುವಿಗೆ ಕೃಷ್ಣಮಠದಲ್ಲೇ ಅನ್ನಪ್ರಾಶನ ಮಾಡಿಸಿದರು. ಇದು ನಮ್ಮ ದೊಡ್ಡ ಆಸೆಯಾಗಿತ್ತು. ಮಠದಲ್ಲಿ ಭಕ್ತರಿಗೆ ಅನ್ನಪ್ರಸಾದ ಆರಂಭವಾದ ದಿವಸವೇ ನಾವು ಮಗುವಿಗೆ ಅನ್ನಪ್ರಾಶನ ಮಾಡಿಸಿರುವುದು ಸಂತಸ ತಂದಿದೆ ಎಂದು ಖುಷಿಪಟ್ಟಿದ್ದಾರೆ.
ಭಕ್ತರಿಗೆ ಅನ್ನ ಪ್ರಸಾದ ನೀಡಲೆಂದೇ ಮೂರು ಕೌಂಟರ್ಗಳನ್ನು ತೆರೆಯಲಾಗಿದೆ. ಮೊದಲ ದಿನದ ಮಧ್ಯಾಹ್ನ 2,500 ಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದರು. ಇದಕ್ಕೂ ಮೊದಲು ಕೋವಿಡ್ ನಿಯಮದ ಅನುಸಾರ ಭಕ್ತರಿಗೆ ಶ್ರೀಕೃಷ್ಣನ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.