- 2024ರ ಏಪ್ರಿಲ್ ಹೊತ್ತಿಗೆ ಉತ್ಪಾದನೆ ಆರಂಭ, ವೇಗ ಹೆಚ್ಚಿಸಿದ ಹೊಸ ಸರ್ಕಾರ
ಬೆಂಗಳೂರು:
ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ 2024ರ ಏಪ್ರಿಲ್ 1ರ ವೇಳೆಗೆ ದೇವನಹಳ್ಳಿ ಘಟಕದಲ್ಲಿ ಉತ್ಪಾದನೆ ಆರಂಭಿಸುವ ಗುರಿಗೆ ಪೂರಕವಾಗಿ ಜುಲೈ 1ರ ವೇಳೆಗೆ ಆ ಕಂಪನಿಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗುರುವಾರ ಹೇಳಿದರು.
ಜಾರ್ಜ್ ಚು ಅವರ ನೇತೃತ್ವದಲ್ಲಿ ಫಾಕ್ಸ್ ಕಾನ್ ಕಂಪನಿಯ ಉನ್ನತ ಅಧಿಕಾರಿಗಳ ತಂಡವು ಸೌಜನ್ಯದ ಭೇಟಿ ನಂತರ ಸಚಿವ ಪಾಟೀಲ್ ಈ ಮಾಹಿತಿ ನೀಡಿದರು
ಕಾಂಗ್ರೆಸ್ ಸರ್ಕಾರವು 50,000 ಜನರಿಗೆ ಉದ್ಯೋಗ ಒದಗಿಸುವ 13,600 ಕೋಟಿ ರೂಪಾಯಿಯ ಮೊತ್ತದ ಈ ಯೋಜನೆ ಜಾರಿಗೆ ವೇಗ ನೀಡಿದಂತಾಗಿದೆ.
ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ (ಐಟಿಐಆರ್) ಕಾರ್ಯಯೋಜನೆಗಾಗಿ 300 ಎಕರೆ ಗುರುತಿಸಲಾಗಿದೆ. 2024ರ ಏಪ್ರಿಲ್ 1ರ ವೇಳೆಗೆ ಇಲ್ಲಿ ಕಂಪನಿಯು ತಯಾರಿಕೆ ಶುರು ಮಾಡುವ ಗುರಿ ಹಾಕಿಕೊಂಡಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜುಲೈ 1ಕ್ಕೆ ಮುಂಚೆ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು ಎಂದರು.
ಕಂಪನಿಯು ದಿನಕ್ಕೆ 50 ಲಕ್ಷ ಲೀಟರ್ ನೀರು ಬೇಕಾಗುವುದಾಗಿ ತಿಳಿಸಿದೆ. ಇದನ್ನು ಪೂರೈಸುವ ಜೊತೆಗೆ ಗುಣಮಟ್ಟದ ವಿದ್ಯುತ್, ರಸ್ತೆ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.
ಕಂಪನಿಯ ಸಿಬ್ಬಂದಿಗೆ ಬೇಕಾಗುವ ಕೌಶಲ್ಯ ವಿವರಗಳನ್ನು ಕೂಡ ಕೇಳಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರದ ವತಿಯಿಂದ ಅರ್ಹರಿಗೆ ಕೌಶಲ್ಯ ತರಬೇತಿ ಕೊಟ್ಟು ಮಾನವ ಸಂಪನ್ಮೂಲ ಲಭ್ಯವಾಗಿಸಲು ಒತ್ತು ಕೊಡುವುದಾಗಿಯೂ ಅವರು ತಿಳಿಸಿದರು.
ತೈವಾನ್ ಮೂಲದ ಮುಂಚೂಣಿ ಕಂಪನಿಯು ಮೂರು ಹಂತಗಳಲ್ಲಿ ಘಟಕ ನಿರ್ಮಾಣ ಪೂರೈಸಿ ಅಂತಿಮವಾಗಿ ಇಲ್ಲಿ ವರ್ಷಕ್ಕೆ 2 ಕೋಟಿ ಮೊಬೈಲ್ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಭೂಮಿಗಾಗಿ ನಿಗದಿಗೊಳಿಸಿರುವ ಮೊತ್ತದಲ್ಲಿ ಶೇಕಡ 30ರಷ್ಟನ್ನು (90 ಕೋಟಿ ರೂಪಾಯಿ) ಕಂಪನಿಯು ಕೆ.ಐ.ಎ.ಡಿ.ಬಿ.ಗೆ ಪಾವತಿಸಿದೆ.
ಕಂಪನಿಯ ಪೌಲ್ ಲಿಯು, ಟಾನ್ನಿ ಲಿಯು, ಸೈಮನ್ ಸಾಂಗ್, ಭಾರತ್ ದಂಡಿ ಮತ್ತಿತರರು ಇದ್ದರು.
ಜುಬಿಲಿಯಂಟ್ ಫುಡ್ ವರ್ಕ್ಸ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಮರದೀಪಸಿಂಗ್ ಅಹ್ಲುವಾಲಿಯಾ, ಎಫ್ಐಸಿಸಿಐ ಕರ್ನಾಟಕ ಮಂಡಳದ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್, ಕರ್ನಾಟಕ ಮಂಡಳದ ಅಧ್ಯಕ್ಷ ಶಜು ಮಂಗಳಂ, ಸಿಐಐ ಕರ್ನಾಟಕ ಮಂಡಲ ಅಧ್ಯಕ್ಷ ವಿಜಯಕೃಷ್ಣನ್ ವೆಂಕಟೇಶನ್ ಮತ್ತಿತರರು ಸಚಿವರನ್ನು ಭೇಟಿಯಾಗಿದ್ದರು.
ಇಂದಿನ ಸಭೆಯಲ್ಲಿ
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ,
ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರು ಇದ್ದರು.
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ