1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿತ್ತು. ಈ ಗೆಲುವಿನ ಸಂಕೇತವಾಗಿ ಡಿ.16ನ್ನು ವಿಜಯ ದಿವಸ ಎಂದು ಪ್ರತೀ ವರ್ಷ ಆಚರಿಸಲಾಗುತ್ತದೆ.
ಈ ದಿನದಂದು ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ. ಆ ವೇಳೆ ಬಾಂಗ್ಲಾದೇಶ ಎಂಬ ದೇಶವೂ ಉದಯವಾಯಿತು.
ವಿಜಯ್ ದಿವಸ್ ದ ಮಹತ್ವ
1971ರ ಇಂಡೋ-ಪಾಕ್ ಯುದ್ಧವು ಸುಮಾರು 13 ದಿನಗಳ ಕಾಲ ನಡೆಯಿತು. ಡಿಸೆಂಬರ್ 16ರಂದು ಕೊನೆಗೊಂಡಿತು.
1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆಗ ಬಾಂಗ್ಲಾವನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಸೈನಿಕರು ಅಲ್ಲಿನ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಇದರಿಂದಾಗಿ ಅಲ್ಲಿನ 9 ಲಕ್ಷ ನಿರಾಶ್ರಿತರು ಭಾರತದೊಳಕ್ಕೆ ನುಸುಳಿದ್ದರು. ಆಗ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆ ನಡೆಸುತ್ತಿದ್ದ ಕೃತ್ಯವನ್ನು ವಿರೋಧಿಸಿ ಭಾರತ ಬಾಂಗ್ಲಾದೇಶಕ್ಕೆ ಬೆಂಬಲ ಕೊಟ್ಟಿತ್ತು.
ಭಾರತದ ಬೆಂಬಲ- ಪಾಕ್ ಗೆ ಹಿನ್ನಡೆ
ಬಾಂಗ್ಲಾದೇಶ ವಿಮೋಚನೆಗೆ ಭಾರತವೂ ಬೆಂಬಲ ನೀಡಿತ್ತು. ಇದು ಪಾಕಿಸ್ತಾನದ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್ ಗೆ ತೀವ್ರ ಹಿನ್ನಡೆಯಾಯಿತು. 1971ರ ಡಿಸೆಂಬರ್ 3 ರಂದು ಪೂರ್ವ ಪಾಕಿಸ್ತಾನದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ವಿರುದ್ಧ ಸಮರ ನಡೆಸಲು ಸಜ್ಜಾಗಿ ಎಂದು ಭಾರತೀಯ ಸೇನೆಗೆ ಭಾರತದ ಸರ್ಕಾರ ಆದೇಶ ನೀಡಿತ್ತು.
ಜನ್ಮ ತಳೆದ ಬಾಂಗ್ಲಾದೇಶ :
1971ರ ಡಿಸೆಂಬರ್ 16ರಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು 93 ಸಾವಿರ ಸೈನಿಕರು ಭಾರತೀಯ ಸೇನೆ ಮತ್ತು ಮುಕ್ತಿ ಬಹಿನಿ ಒಳಗೊಂಡ ಮಿತ್ರ ಪಡೆಗಳಿಗೆ ಬೇಷರತ್ತಾಗಿ ಶರಣಾಗಿದ್ದರು. ಯುದ್ಧದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಜನ್ಮತಳೆದಿತ್ತು.
ಈ ಯುದ್ಧದ ಅಂತ್ಯದ ಬಳಿಕ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲಾಯಿತು. ಇದರ ಪ್ರತೀಕವಾಗಿ ಬಾಂಗ್ಲಾದೇಶ ಪ್ರತೀ ವರ್ಷ ಡಿ.16ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ.
ಹುತಾತ್ಮ ಯೋಧರಿಗೆ ಗೌರವ ನಮನ
ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ತಮ್ಮ ಪ್ರಾಣ ಅರ್ಪಿಸಿದ ಭಾರತದ ಹುತಾತ್ಮ ಯೋಧರಿಗೆ ಈ ದಿನದಂದು ಗೌರವ ನಮನ ಸಲ್ಲಿಸಲಾಗುತ್ತದೆ.
ಭಾರತದ ಗಡಿ ಭಾಗದಲ್ಲಿ ಬಿಎಸ್ ಎಫ್ ಸೈನಿಕರು 110 ಕಿಮಿ ಓಡಿ ಹುತಾತ್ಮರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು.