February 20, 2026

Newsnap Kannada

The World at your finger tips!

Newsnap 100 days

ನೂರು ದಿನ, ಲಕ್ಷಕ್ಕೂ ಅಧಿಕ ವೀಕ್ಷಕರು..,

Spread the love

ಕರುಣಾಳು ಬಾ ಬೆಳಕೆ ಮಸುಕೀದಿ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು…..
ಬಿಎಂಶ್ರೀಯವರ ಈ ಕವನದ ಸಾಲುಗಳು ಪ್ರತಿಯೊಬ್ಬರ ಆತ್ಮಸ್ಥೆರ್ಯವನ್ನು ಇಮ್ಮಡಿಗೊಳಿಸುತ್ತವೆ.

ಇಂದು ಬದುಕಿನ ಖುಷಿ ದಿನ. ಯಾಕೆ ಗೊತ್ತ ? 30- 32 ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿ ಬದುಕಿನ ಹಾದಿ ಕಂಡುಕೊಂಡಿದ್ದ ನನಗೆ ಬದಲಾದ ಪ್ರಪಂಚ , ತಂತ್ರಜ್ಞಾನದ ಮೂಲಕವೂ ಪತ್ರಿಕೆಯ ರೀತಿಯಲ್ಲಿ ಕೆಲಸ ಮಾಡಬಹುದು ಎನ್ನುವುದನ್ನು ಅರಿತೆ.

ಓದುಗರು, ವೀಕ್ಷಕರು ನಿರೀಕ್ಷೆ ಮಾಡಿದ್ದನ್ನು ಪತ್ರಿಕೆಗಳಿಂತಲೂ ವಿಭಿನ್ನ ಮತ್ತು ಕ್ಷಣಾರ್ಧದಲ್ಲಿ ಸುದ್ದಿ ಕೊಡುವ ನ್ಯೂಸ್ ಸ್ನ್ಯಾಪ್ ಎಂಬ ಹೊಸ ವೆಬ್ ಸೈಟ್ ಡಿಜಿಟಲ್ ಮೀಡಿಯಾ ಆರಂಭಿಸುವ ನಿರ್ಧಾರ ಮಾಡಿ, ಆ ನಿಟ್ಟಿನಲ್ಲಿ ಕಾರ್ಯ ಆರಂಭ ಮಾಡಿದೆವು. ಎಲ್ಲಾ ರೀತಿ ಸವಾಲುಗಳನ್ನು ನನಗಿಂತ ಹೆಚ್ಚಿನ ರೀತಿಯಲ್ಲಿ ನಿಭಾಯಿಸಿದವರು ನನ್ನ ಇಬ್ಬರು ಮಕ್ಕಳಾದ ಕೆ . ಆರ್ . ಅನನ್ಯ ಮತ್ತು ಕೆ. ಆರ್ ಮಿಹಿರ್ ಆಕಾಶ್. ಇದಕ್ಕೆ ಪತ್ನಿ ಸುಮಾ ರವಿ ನೀಡಿದ ಸಾಥ್ ಕೂಡ ಅವಿಸ್ಮರಣೀಯ.

ಪತ್ರಿಕೋದ್ಯಮದ ಪಥ ಬದಲಿಸಿ, ಸಂಕ್ರಮಣ ಕಾಲ ಘಟ್ಟದತ್ತ ಅಂಬೇಗಾಲು ಇಟ್ಟು ನೂರು ದಿನ ತಲುಪಿದ ಸಂಭ್ರಮ ಇಂದು. ಅದಕ್ಕೂ ಮಿಗಿಲಾಗಿ ಈ ನೂರು ದಿನದಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಕರು ನಮ್ಮ ವೆಬ್ ಸೈಟ್ ನೋಡಿ, ಸುದ್ದಿ ಓದಿ, ಬೆನ್ನು ತಟ್ಟಿದ್ದನ್ನು ನಾವು ಮರೆಯಲಾರೆವು.‌ ಕೃತಜ್ಞತೆಯಿಂದ ಸ್ಮರಿಸುತ್ತೇವೆ.‌

ಪತ್ರಿಕೋದ್ಯಮದ ಹೊಸ ಮಜಲಿಗೆ ಕಾಲಿಡುವ ಮುನ್ನ ಇದ್ದ ಆತಂಕ, ಭಯ, ಹತಾಶೆ ಈಗ ಯಾವುದೂ ಉಳಿದಿಲ್ಲ. ಕಟ್ಟುವೆವು ನಾವು ಹೊಸ ನಾಡೊಂದನ್ನು , ಹೊಸ ಬೀಡೊಂದನ್ನು ಎಂಬ ಕವಿ ಕವನದ ಸ್ಫೂರ್ತಿ ಹೊಸ ಸಂಸ್ಥೆಯ ಉದಯಕ್ಕೆ ನಾಂದಿಯಾಯಿತು.ಗಟ್ಟಿಯಾಗುತ್ತಾ ಸಾಗಿದೆ.

ಮುಂದಿನ ದಿನಗಳಲ್ಲಿ ನಾವು ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಪ್ರಬುದ್ಧಮಾನಕ್ಕೆ ಬಂದೇ ಬರುತ್ತೇವೆ ಎಂಬ ಆತ್ಮವಿಶ್ವಾಸ ಇದ್ದೇ ಇದೆ. ಅದು ದಾರಿ ದೀಪವಾಗಿ ಬೆಳಗಿಸುತ್ತದೆ ಎಂಬ ಅಚಲ ನಂಬಿಕೆ.

ಅಗಸ್ಟ್ 28 ರಂದು ನ್ಯೂಸ್ ಸ್ನ್ಯಾಪ್ ವೆಬ್ ಸೈಟ್ ಅನ್ನು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರಿಂದ ಉದ್ಘಾಟನೆ ಮಾಡಿಸಿದೆವು. ಮಾಜಿ‌ ಮಂತ್ರಿಗಳಾದ ಚಲುವರಾಯ ಸ್ವಾಮಿ, ಸಿ. ಎಸ್. ಪುಟ್ಟರಾಜು ವಿಧಾನ ಪರಿಷತ್ ಸದಸ್ಯ ಕೆ .ಟಿ. ಶ್ರೀಕಂಠೇಗೌಡರು, ಶಾಸಕ ಡಿ ಸಿ ತಮ್ಮಣ್ಣ ಸೇರಿದಂತೆ ಆತ್ಮೀಯ ಪತ್ರಕರ್ತ ಮಿತ್ರರ ದೊಡ್ಡ ಬಳಗ, ಬಂಧುಗಳು, ಹಿತೈಷಿಗಳು, ಕುಟುಂಬದ ಒಡನಾಡಿಗಳು ಆ ದಿನ ಕಾರ್ಯಕ್ರಮಕ್ಕೆ ತನು, ಮನದೊಂದಿಗೆ ನಮ್ಮೊಂದಿಗೆ ಇದ್ದು ಶುಭ ಹಾರೈಸಿದ್ದಾರೆ.

ಶಾಸಕ ಗೆಳೆಯ ರವೀಂದ್ರ ಶ್ರೀಕಂಠಯ್ಯ ನಮ್ಮ ಕುಟುಂಬದ ಆತ್ಮೀಯರು. ಕಷ್ಟ – ಸುಖದ ಪಾಲುದಾರರು. ವೆಬ್ ಸೈಟ್ ಮಾತ್ರವಲ್ಲದೆ ನನ್ನ ಪತ್ರಿಕೋದ್ಯಮದ ಕ್ರಿಯಾಶೀಲತೆಯೂ ಸದಾ ಜೀವಂತವಾಗಿರಬೇಕು ಎಂದು ಬಯಸಿದವರಲ್ಲಿ ಒಬ್ಬರು. ಅವರ ಪ್ರೋತ್ಸಾಹವಂತೂ ಸ್ಮರಣೀಯ.

ನಮ್ಮ ವೆಬ್ ಸೈಟ್ ಆರಂಭ ದಿನದಿಂದಲೂ ಸದಾ ಬೆಂಬಲಕ್ಕೆ ನಿಂತು, ಲೇಖನ ಬರೆದು, ಪ್ರೋತ್ಸಾಹಿಸಿದ ದೊಡ್ಡ ಬಳಗವೇ ಇದೆ. ಹಿರಿಯ ಪತ್ರಕರ್ತರಾದ ಲಕ್ಷ್ಮಣ್ ಕೊಡಸೆ,
ಎಚ್ ಆರ್ ಶ್ರೀಶಾ, ಕೆ . ಸಿ. ಸತ್ಯ ಪ್ರಕಾಶ್, ಡಾ. ಶ್ರೀ ರಾಮ್ ಭಟ್, ಡಾ. ಶುಭಶ್ರೀ ಪ್ರಸಾದ್. ಸ್ಮಿತಾ ವೆಂಕಟೇಶ್, ಮೈಸೂರು ಜಯಕವಿ, ಡಾ. ಪ್ರದೀಪ್ ಕುಮಾರ್ ಹೆಬ್ರಿ, ಡಾ ಸುಮಾರಾಣಿ, ಹೊಳಲು ಶ್ರೀಧರ್ , ಮೈಸೂರಿನ ಪೋಟೊ ಜರ್ನಲಿಸ್ಟ್ ಶ್ರೀ ರಾಮ್ ಗೋವಿಂದ ಕುಲಕರ್ಣಿ, ಮೈಲಾರ ಸಾವಿತ್ರಿ ಬಾಯಿ, ಎಚ್.ಟಿ.ಅನಿಲ್ ಸೇರಿದಂತೆ ಹತ್ತಾರು ಲೇಖಕರು ಲೇಖನಗಳನ್ನು ಬರೆದು ಕೊಟ್ಟು, ವೀಕ್ಷಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲು ನೆರವು ನೀಡಿದ್ದಾರೆ

ನಮ್ಮ ನ್ಯೂಸ್ ಸ್ನ್ಯಾಪ್ ವೆಬ್ ಸೈಟ್ ವಿಶ್ವಾಸಾರ್ಹತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಭರವಸೆ ಮೂಡಿಸುವ ನಿಟ್ಟಿನಲ್ಲಿ ನಾವು ಕ್ರಿಯಾಶೀಲತೆ ಉಳಿಸಿಕೊಂಡು ಸಾಮಾಜಿಕ ಕಳಕಳಿಯೊಂದಿಗೆ ಹೆಜ್ಜೆ ಹಾಕುತ್ತೇವೆ. ನೀವೂ ಸಹ ನಮ್ಮೊಂದಿಗೆ ಇರುತ್ತೀರಾ ಎನ್ನುವ ಬಲವಾದ ನಂಬಿಕೆಯೊಂದಿಗೆ.

ನಮಸ್ಕಾರ
ಕೆ ಎನ್ ರವಿ
ಸಂಪಾದಕ ಹಾಗೂ ಟೀಂ ನ್ಯೂಸ್ ಸ್ನ್ಯಾಪ್

error: Content is protected !!