March 12, 2026

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 6 – ರಾಯಚೂರು

Spread the love

ಕಲಾವತಿ ಪ್ರಕಾಶ್

ರಾಯಚೂರು

ರಾಯಿ ಎಂದರೆ ಕಲ್ಲೆಂಬ ಅರ್ಥವಂತೆ
ಕಲ್ಲು ಬೆಟ್ಟಗಳೂರು ರಾಯಚೂರಂತೆ
ರಾಯನ ಊರು ರಾಯಚೂರೆಂದು
ಹೆಸರು ಪಡೆದು ಕೊಂಡಿದೆಯಂತೆ

ಶಿಲಾಯುಗದಿಂದಲೇ ಆರಂಭಗೊಂಡಿದೆ
ಇಲ್ಲಿಯ ಇತಿಹಾಸ ಪರಂಪರೆಯು
ಮೌರ್ಯ ಚಾಲುಕ್ಯ ಶಾತವಾಹನ
ಯಾದವ ನಿಜಾಮರಾಳ್ವಿಕೆಯು

ಎನಿತೋ ಸಾಮ್ರಾಜ್ಯಗಳ ಇತಿಹಾಸದ
ಪುಟಗಳ ತೆರೆದಿಡುವ ಕೋಟೆಗಳಿಹವಿಲ್ಲಿ
ಕಾಕತೀಯರು ನಿರ್ಮಿಸಿದಂಥ
ಕೋಟೆ ಇರುವುದೂ ರಾಯಚೂರಿನಲ್ಲಿ

ಜಲದಿಂದಾವೃತ ಜಲದುರ್ಗ ಕೋಟೆ
ಶಾಹಿ ದೊರೆಗಳ ನಿರ್ಮಿತ ಕೋಟೆ
ಇತಿಹಾಸದಲ್ಲೇ ಪ್ರಸಿದ್ಧ ಪೇಟೆ
ನೂರಾರು ಶಾಸನಗಳಿಹ ಮುದ್ಗಲ್ ಕೋಟೆ

ಕೃಷ್ಣ ತುಂಗಭದ್ರಾ ಹರಿಯುವ
ಜಿಲ್ಲೆ ಈ ನಾಡಾದರೂ
ಜಲ ಕ್ಷಾಮ ಎದುರಿಸುವರು
ಬಹು ಭಾಗದ ಈ ಜಿಲ್ಲೆಯ ಜನರು

ಹತ್ತಿಯ ನಾಡೆಂದು ಹೆಸರಾಗಿರುವ
ಭತ್ತದ ಕಣಜವೂ ಈ ಜಿಲ್ಲೆ
ದೇಶದಲ್ಲೇ ಅತಿ ಹೆಚ್ಚು ಟ್ರ್ಯಾಕ್ಟರ್
ಆಮದು ಮಾರಾಟ ಮಾಡುವುದಿಲ್ಲೆ

ಭಾರತದೊಳಗತಿ ಚಿನ್ನದ ಅದಿರಿನ
ಗಣಿ ಇರುವುದೂ ಈ ಜಿಲ್ಲೆಯಲಿ
ಗಣಿಗಾರಿಕೆ ಆರಂಭವು ಕೂಡ
ಅಶೊಕನ ಕಾಲಕೂ ಮೊದಲಲ್ಲೇ

ರಾಯಚೂರಿನ ಶಕ್ತಿ ನಗರದ
ಶಾಖೋತ್ಪನ್ನಕೆ ಕಲ್ಲಿದ್ದಲೇ ಆಧಾರ
ಭಾರತದ ಮೊದಲ ವಿದ್ಯುತ್ ಘಟಕ
ಕರುನಾಡಿನ ಹೆಚ್ಚು ಉತ್ಪಾದನೆಯ ಸ್ಥಾವರ

ಮೂರು ಯುಗಗಳ ತಪೋ ಭೂಮಿ ಈ ಊರು
ಅಮರೇಶ್ವರದ ಕಪಿಲ ಅಗಸ್ತ್ಯಮುನಿ ರೇವಣಸಿದ್ಧರು
ವಚನ ಸಾಹಿತ್ಯದ ಪಿತಾಮಹರಿವರು
ಹೆಸರಾಂತ ಆದಿ ಅಮಾತ್ಯಪ್ಪ ಮೊದಲಿಗರು

ಹರಿದಾಸ ಸಾಹಿತ್ಯದ ಉಗಮದ ಊರು
ಇದೇ ಜಿಲ್ಲೆಯ ರಾಯಚೂರು
ಇಲ್ಲಿಯೆ ಜನಿಸಿದ ದಾಸ ಸಾಹಿತಿಗಳಿವರು
ಅವರೇ ನಮ್ಮ ಜಗನ್ನಾಥ,ವಿಜಯದಾಸರು

ಕನ್ನಡ ಸಾಹಿತ್ಯದ ಗಝಲ್ ಜನಕರೆಂದು
ಹೆಸರು ಪಡೆದವರು ಶಾಂತರಸರು
ಗಿರಿರಾಜ್ ಹೊಸಮನಿ ಭೀಮಸೇನ್ ರಾವ್
ರಾಯಚೂರಿನ ಸಾಹಿತಿಗಳು ಇವರು

ಯಲ್ಲಮ್ಮ ದೇವಿಯ ದೇವಸ್ಥಾನ
ಅಂಬಾದೇವಿಯ ಮಂದಿರದೂರು
ಎರಡನೆ ಶ್ರೀಶೈಲವೆಂಬ ಈ ಊರು
ನೆಲೆಸಿಹರಿಲ್ಲಿ ಮಲ್ಲಿಕಾರ್ಜುನ ದೇವರು

error: Content is protected !!