ಮಂಡ್ಯ :
ಐಎಎಸ್ ಮಾಡುವ ಕನಸು ನನಸಾಗದ ಹಿನ್ನೆಲೆ ಹಾಗೂ ಜೀವನದಲ್ಲಿ ಜಿಗುಪ್ಸೆ ಗೊಂಡ ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಾವೇರಿ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಶೃತಿ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿನಾಯಕ ಬಡಾವಣೆಯ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಐಎಎಸ್ ಕನಸು ಮತ್ತು ಜೀವನದ ವೈಫಲ್ಯ ಸಾವಿಗೆ ಕಾರಣ ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲದ ಮಲ್ಲಪ್ಪರ ಪುತ್ರಿಯಾದ ಶೃತಿ ಕಾವೇರಿ ಗ್ರಾಮೀಣ ಬ್ಯಾಂಕ್ ನ ಉದ್ಯೋಗಿಯಾಗಿ ನೇಮಕ ಗೊಂಡು ಚಿಕ್ಕಮಗಳೂರಿನ ಶಾಖೆಯಲ್ಲಿ ಕಳೆದ ಏಳು ವರ್ಷ ಕಾರ್ಯನಿರ್ವಹಿಸಿ ಮಂಡ್ಯದ ಪ್ರಾದೇಶಿಕ ಕಚೇರಿಗೆ ಎರಡು ತಿಂಗಳ ಹಿಂದೆ ಬಂದಿದ್ದರು.
ವಿನಾಯಕ ಬಡಾವಣೆಯ ರಾಜಣ್ಣರ ಮನೆಯನ್ನು ಬಾಡಿಗೆಗೆ ಪಡೆದು ಅವಿವಾಹಿತರಾಗಿದ್ದ ಹಿನ್ನೆಲೆಯಲ್ಲಿ ಒಬ್ಬರೆ ವಾಸವಾಗಿದ್ದರು.
ಭಾನುವಾರ ರಾತ್ರಿ ಏಳರ ಸಮಯದಲ್ಲಿ ತಂದೆ ಮಲ್ಲಪ್ಪರಿಗೆ ಕರೆ ಮಾಡಿದ ಶೃತಿ ನಾನು ದೇವರ ಬಳಿ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಿ ಎಂದು ಹೇಳಿ ಕರೆ ಕಡಿತ ಮಾಡಿದ್ದಾರೆ, ತಕ್ಷಣ ಮತ್ತೆ ಅವರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಮಂಡ್ಯದಲ್ಲಿರುವ ಸಂಬಂಧಿಕರಿಗೆ ಮಲ್ಲಪ್ಪ ವಿಚಾರ ತಿಳಿಸಿದ್ದು. ಮನೆಯ ಬಳಿ ಹೋಗಿ ನೋಡಿದಾಗ ಅಷ್ಟರಲ್ಲಿ ನೇಣು ಬಿಗಿದುಕೊಂಡಿದ್ದರು.
ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿರುವ ಶೃತಿ ಐಎಎಸ್ ಮಾಡಬೇಕೆಂಬ ಕನಸು ನನಸಾಗಲಿಲ್ಲ, ಜೊತೆಗೆ ಜೀವನದಲ್ಲಿಯೂ ನಾನು ವೈಫಲ್ಯವನ್ನೂ ಕಂಡಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.