January 29, 2026

Newsnap Kannada

The World at your finger tips!

marriage

ತಾಳಿ ಕಟ್ಟಲು ಮುಂದಾದ ವರನಿಗೆ ಶಾಕ್ ನೀಡಿದ ವಧು!

Spread the love

ಹೊಸ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂಬ ಖುಷಿಯಲ್ಲಿ ಹುರುಪಿನೊಂದಿಗೆ ಮದುವೆ ಮಂಟಪದ ಹಸೆಮಣೆಯಲ್ಲಿ ಕುಳಿತಿದ್ದ ವರನೊಬ್ಬ ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಚಪ್ಪಾಳೆ ತಟ್ಟುತ್ತಾ ವಧು ಹೇಳಿದ ಮಾತು ಕೇಳಿ ಒಂದು ಕ್ಷಣ ದಿಗಿಲು ಬಡಿದಂತಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮದುವೆ ಮಂಟಪಕ್ಕೆ ವಧು ಅಥವಾ ವರ ಬರದೇ ಸಮಾರಂಭ ನಿಂತಿರುವುದನ್ನು ಕೇಳಿದ್ದೇವೆ. ಯಾವುದಾದರೂ ಅನಾಹುತ ಸಂಭವಿಸಿದಾಗಲೂ ಮದುವೆ ಕಾರ್ಯ ನಿಂತಿರುತ್ತದೆ. ಆದರೆ, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿಯಲ್ಲಿ ನಡೆದ ಘಟನೆ ಇದಕ್ಕೆ ತದ್ವಿರುದ್ಧವಾಗಿದೆ.

ಚಪ್ಪಾಳೆ ತಟ್ಟಿದ ವಧು

ತಾಳಿ ಕಟ್ಟುವವರೆಗೂ ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿಯೇ ನಡೆದಿತ್ತು. ವಧುವೂ ಸಹ ಖುಷಿಯಾಗಿಯೇ ಮಂಟಪಕ್ಕೆ ಅಲಂಕಾರ ಸಮೇತ ಬಂದಿದ್ದಳು. ಅವಳನ್ನು ನೋಡಿ ವರನೂ ಸಹ ಉಲ್ಲಾಸಗೊಂಡಿದ್ದನು. ಹೊಸ ಜೀವನ ಪ್ರಾರಂಭಿಸಲು ತುದಿಗಾಲಲ್ಲಿ ನಿಂತಿದ್ದ ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಅಷ್ಟರಲ್ಲಿ ವಧು ಚಪ್ಪಾಳೆ ತಟ್ಟುತ್ತಾ ನನಗೆ ಮದುವೆ ಇಷ್ಟವಿಲ್ಲ ಎನ್ನುವುದನ್ನು ಕೇಳಿ ಇಡೀ ಮದುವೆ ಮಂಟಪ ನಿಶ್ಯಬ್ಧಕ್ಕೆ ಜಾರಿತ್ತು.

ವರನಿಗೆ ಶಾಕ್ ಕೊಟ್ಟ ವಧು

ತಾಳಿ ಕಟ್ಟುವ ಸಮಯದಲ್ಲಿ ವರನಿಗೆ ಶಾಕ್​ ನೀಡಿದ ವಧು, ಚಪ್ಪಾಳೆ ತಟ್ಟುತ್ತಾ ಮದುವೆ ಇಷ್ಟವಿಲ್ಲ. ಇನ್ನು ಅರ್ಧ ಗಂಟೆಯಲ್ಲಿ ನನ್ನ ಪ್ರಿಯಕರ ಆಗಮಿಸುತ್ತಾನೆ ಎಂದು ವರನಿಗೆ ಹೇಳುತ್ತಾಳೆ. ಅದನ್ನು ಕೇಳಿದ ವರ ಶಾಕ್​ನಿಂದ ಒಂದೂ ತಿಳಿಯದಂತೆ ಹಿರಿಯರತ್ತ ಮುಖ ತಿರುಗಿಸುತ್ತಾನೆ.

ವಧುವಿಗೆ ಕಪಾಳ ಮೋಕ್ಷ

ವಧು ಏನೇ ಹೇಳಿದರು ವರ ಮಾತ್ರ ಕುಳಿತ ಜಾಗದಿಂದ ಕದಲುವುದೇ ಇಲ್ಲ. ಆಸೆಯ ಕಣ್ಣುಗಳಿಂದ ಆಕೆಯನ್ನೇ ನೋಡುವಾಗ ಇದ್ದಕ್ಕಿದಂತೆ ಎದ್ದು ನಿಲ್ಲುವ ವಧು ಅಲ್ಲಿಂದ ಹೊರಡಲು ಮುಂದಾಗುತ್ತಾಳೆ. ಈ ವೇಳೆ ಮಧ್ಯ ಪ್ರವೇಶಿಸುವ ಆಕೆಯ ಮನೆಯವರು ಕಪಾಳಕ್ಕೆ ಬಾರಿಸಿದರೂ ಆ ಬಗ್ಗೆ ತಲೆ ಕೆಡೆಸಿಕೊಳ್ಳದ ಪ್ರಿಯದರ್ಶಿನಿ ಮಂಟಪದಿಂದ ಹೊರನಡೆಯುತ್ತಾಳೆ.

ಕೈ ಕೊಟ್ಟ ಪ್ರಿಯಕರ !

ಆದರೆ, ಆಕೆಯ ಪ್ರಿಯಕರ ಮಾತ್ರ ಮಂಟಪಕ್ಕೆ ಬರುವುದೇ ಇಲ್ಲ. ಅತ್ತ ವರನೂ ಸಹ ದುಃಖದಿಂದಲೇ ಅಲ್ಲಿಂದ ನಿರ್ಗಮಿಸುತ್ತಾರೆ. ಇತ್ತ ವಧುವಿನ ಮನೆಯವರು ಆಕೆಯನ್ನು ಶಪಿಸುತ್ತಲೇ ಮಗಳ ಹಿಂದೆ ಹೋಗುತ್ತಾರೆ. ಆದರೆ, ವಧು ಮಾತ್ರ ಯಾರಿಗೂ ಸಿಗದೇ ಅಲ್ಲಿಂದ ಹೊರಡುತ್ತಾಳೆ.

error: Content is protected !!