ಗ್ರಾಹಕಸ್ನೇಹಿ ಬ್ರಾಡ್ಬ್ಯಾಂಡ್ ಮತ್ತು ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, 2021-22 ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಜ್ಞರು ನೀಡುವ ಸಲಹೆಯಂತೆ ಶೀಘ್ರದಲ್ಲೇ ಹೊಸ ಡಿಜಿಟಲೀಕರಣ ನೀತಿ ಜಾರಿ ಮಾಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಗೆ ಒತ್ತುಕೊಡಲು ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಗಮನಹರಿಸಲಾಗುವುದು. ಮುಂದಿನ ಆಯವ್ಯಯದಲ್ಲಿ ಈ ವಿಷಯಕ್ಕೆ ವಿಶೇಷ ಆದ್ಯತೆ ನೀಡಲಾಗುವುದು.
ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಕೌನ್ಸಿಲ್ ರಚಿಸಲಾಗುವುದು. ಇದು ಕಲಬುರಗಿಯಲ್ಲಿ ಅಸ್ತಿತ್ವಕ್ಕೆ ಬರಲಿದೆ, 8 ನೇ ತರಗತಿಯಿಂದಲೇ ವ್ಯಕ್ತಿತ್ವ ವಿಕಸನ ವಿಷಯ ಬೋಧಿಸಬೇಕು. ಗ್ರಾಮೀಣ ಭಾಗದಲ್ಲೇ ಎಲ್ಲಾ ರೀತಿಯ ಶೈಕ್ಷಣಿಕ ಸೌಲಭ್ಯ ಸಿಗಬೇಕು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಈ ವರ್ಷದಿಂದಲೇ ಪದವಿಗೆ ಸೇರುವ ವಿದ್ಯಾರ್ಥಿಗಳಿಗೆ ಐಪ್ಯಾಡ್ ನೀಡಲಾಗುವುದು ಎಂದರು.