March 13, 2026

Newsnap Kannada

The World at your finger tips!

sindhuri

ಆಯುಕ್ತೆ ‌ಶಿಲ್ಪಾ ನಾಗ್‌ ಗೆ ನಿರಂತರ ಕಿರುಕುಳ: ಡಿಸಿ ಸಿಂಧೂರಿ ವರ್ತನೆಗೆ ಬೇಸತ್ತು ರಾಜೀನಾಮೆ

Spread the love

ಡಿಸಿ ರೋಹಿಣಿ ಸಿಂಧೂರಿ ದುರಹಂಕಾರದ ವರ್ತನೆ, ದಬ್ಬಾಳಿಕೆ, ಪದೇ ಪದೇ ಅಪಮಾನ‌ ಮಾಡುವ ನೋವು ಉಂಟು‌ ಮಾಡುತ್ತಾರೆ ಎಂದು ಕಣ್ಣೀರು ಹಾಕಿದ ಮಾಹಾ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌ , ತಮ್ಮ‌ ಐಎಎಸ್ ಹುದ್ದೆಗೆ ‌ರಾಜೀನಾಮೆ ನೀಡುವುದಾಗಿ‌ ಪ್ರಕಟಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಆಯುಕ್ತೆ ಶಿಲ್ಪಾ ನಾಗ್ ತಮಗೆ ಸಿಂಧೂರಿ ಉಂಟು ಮಾಡುವ ಕಿರುಕುಳದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿ ಇಟ್ಟರು.

ನಾನು ಅತ್ಯಂತ ದುಃಖದಿಂದ ಮಾತನಾಡುತ್ತಿದ್ದೇನೆ. ಈ ಡಿಸಿ ಪಾಲಿಕೆ ವಿರುದ್ಧ ಸಮರ ಸಾರುತ್ತಿದ್ದಾರೆ. ನಗರಕ್ಕೆ ಒಂದು ಮಾನದಂಡ, ಗ್ರಾಮಾಂತರಕ್ಕೆ ಒಂದು ಮಾನದಂಡ ಮಾಡಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಅಂತಾರೆ. ಜಿಲ್ಲಾಧಿಕಾರಿಗಳೇ ಈ ರೀತಿ ಹೇಳುತ್ತಿದ್ದಾರೆ. ಏನೂ ಕೆಲಸ ಮಾಡಿಲ್ಲ ಎಂಬ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹಲವು ಆರೋಪಗಳನ್ನು ಮಾಡಿ ಕಣ್ಣೀರು ಹಾಕುತ್ತಲೇ ತಮ್ಮ ರಾಜೀನಾಮೆ ಘೋಷಿಸಿದರು.

ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದೆ. ಅನ್ಯ ಮಾರ್ಗವಿಲ್ಲದೆ ನಾನು ಮಾಧ್ಯಮಗಳ ಮುಂದೆ ಬಂದಿದ್ದೇನೆ‌ ಎಂದರು

ಪ್ರತಿ ದಿನ ನೋಟೀಸ್, ಅವಮಾನ, ಅಪಚಾರ ಮಾಡುತ್ತಿದ್ದಾರೆ. ಫೈನಲ್‌ ಆಗಿ ನನ್ನ ನೋವನ್ನು ಹೇಳಬೇಕೆಂದು ಬಂದಿದ್ದೇನೆ. ನಾನು ಐಎಎಸ್ ಅಧಿಕಾರಿಯಾಗಿ ಸರ್ಕಾರದ ಮುಖ್ಯಕಾರ್ಯದರ್ಶಿ ಗಳಿಗೆ ರಾಜೀನಾಮೆ‌ ಸಲ್ಲಿಸುತ್ತಿದ್ದೇನೆ. ಯಾವುದೇ ಜಿಲ್ಲೆಗೂ ಇಂತಹ ಜಿಲ್ಲಾಧಿಕಾರಿಗಳು ಬೇಡ. ಅವರ ದುರಂಕಾರದಿಂದ ಈ ರೀತಿ ಪರಿಸ್ಥಿತಿ ಬಂದಿದೆ ಎಂದು ಶಿಲ್ಪಾ ನಾಗ್ ರಾಜೀನಾಮೆ ಘೋಷಿಸಿದ್ದಾರೆ.
ಐಎಎಸ್ ಅಧಿಕಾರಿ ಹುದ್ದೆಗೂ ರಾಜೀನಾಮೆ‌ ಕೊಡುತ್ತಿದ್ದೇನೆ ಎಂದಿದ್ದಾರೆ.

error: Content is protected !!