ಮಂಡ್ಯದ ಮೈಷುಗರ್ ನಲ್ಲಿ 121 ಕೋಟಿ ಅವ್ಯವಹಾರ

Team Newsnap
3 Min Read

ಮಾಜಿ ಅಧ್ಯಕ್ಷ ನಾಗರಾಜಪ್ಪನ ಕೊರಳಿಗೆ ಕಾನೂನಿನ ಕುಣಿಕೆ ?

  • ನಾಗರಾಜಪ್ಪನ ಚಿರಾಸ್ಥಿ- ಚರಾಸ್ಥಿ ಪಟ್ಟಿ ಕ್ರೋಢಿಕರಣಕ್ಕೆ ಮುಂದಾದ ಮೈಷುಗರ್ ಆಡಳಿತ ಮಂಡಳಿ
  • 121 ಕೋಟಿ ರು ವಸೂಲೀಗೆ ಸಿವಿಲ್ ದಾವೆ ಹೂಡಲು ತಯಾರಿ
  • ತುರ್ತು ಕ್ರಮಕ್ಕೆ ಡಿಸಿ ಆದೇಶ

ಮಂಡ್ಯ:
ಎರಡು ಅವಧಿಯ ಅಧಿಕಾರದಲ್ಲಿ ಭ್ರಷ್ಟ ಆಡಳಿತ ನಡೆಸಿ, 121 ಕೋಟಿ ರು ಅವ್ಯವಹಾರ ಮಾಡಿದ ಆರೋಪವು ಲೋಕಾಯುಕ್ತರ ಅಂಗಳದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪನ ಕೊರಳಿಗೆ ಕಾನೂನಿನ ಕುಣಿಕೆ ಸುತ್ತಿಕೊಳ್ಳುವುದು ನಿಚ್ಚಳವಾಗಿದೆ.

ಮೈಷುಗರ್ ನ ಅಧ್ಯಕ್ಷರಾಗಿದ್ದ ವೇಳೆ ಕೋಟ್ಯಾಂತರ ರು ಹಣ ದುರುಪಯೋಗಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ನಾಗರಾಜಪ್ಪನ ಸ್ಥಿರ ಮತ್ತು ಚರಾಸ್ತಿಗಳನ್ನು ಕ್ರೋಢಿಕರಿಸಿಕೊಂಡು ಸರ್ಕಾರದ ನಷ್ಟ ಭರಿಸಿಕೊಳ್ಳಲು ಮೈಷುಗರ್ ಆಡಳಿತ ಮಂಡಳಿ ಮುಂದಾಗಿದೆ.

121 ಕೋಟಿ ರು ನಷ್ಠ:

2008-09 ಹಾಗೂ 2011-12 ನೇ ಸಾಲಿನಲ್ಲಿ ಮೈಷುಗರ್ ಅಧ್ಯಕ್ಷರಾಗಿದ್ದ ನಾಗರಾಜಪ್ಪ , ತಮ್ಮ ಅಧಿಕಾರ ಅವಧಿಯಲ್ಲಿ ಕಾರ್ಖಾನೆಗೆ 121 ಕೋಟಿ ರೂ. ನಷ್ಟವುಂಟು ಮಾಡಿರುವುದು ಲೋಕಾಯುಕ್ತ ನ್ಯಾಯಾಲಯದಲ್ಲಿ ಈಗ ಸಾಬೀತಾಗಿದೆ.

ಕಾರ್ಖಾನೆಗೆ ಆಗಿರುವ ನಷ್ಟವನ್ನು ನಾಗರಾಜಪ್ಪ ಅವರಿಂದಲೇ ತುಂಬಿಸಿಕೊಳ್ಳುವ ಆದೇಶ ಆಗಿರುವ ಹಿನ್ನೆಲೆಯಲ್ಲಿ ಮೈಷುಗರ್ ಕಾರ್ಖಾನೆಯ ಆಡಳಿತ ಮಂಡಳಿ ಸರ್ಕಾರ ಆದೇಶದ ಮೇರೆಗೆ ಕೆಲವು ದಿಟ್ಟ ಹೆಜ್ಜೆಗಳನ್ನು ತೆಗೆದುಕೊಳ್ಳಲು ಮುಂದಾಗಿದೆ

ದೂರು ನೀಡಿದ್ದು ಯಾರು? :

ಮೈಶುಗರ್ ಅಧ್ಯಕ್ಷರಾಗಿದ್ದ ನಾಗರಾಜಪ್ಪ ಅವರು ಅಧಿಕಾರ ದುರ್ಬಳಕೆ ಹಾಗೂ ಹಣ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘವು ಲೋಕಾಯುಕ್ತರಿಗೆ ದೂರು ನೀಡಿತ್ತು.

ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಅಧಿನಿಯಮ ೧೯೯೪ರ ಕಲಂ೭(೨ಎ)ರಡಿಯಲ್ಲಿ 2021 ಸೆ.1 ರಂದು ನೀಡಿರುವ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಕ್ರಮ ವಹಿಸಿ 2022 ಫೆ.24 ರೊಳಗೆ ಸರ್ಕಾರಕ್ಕೆ ವರದಿಸುವಂತೆ ಕರ್ನಾಟಕ ಲೋಕಾಯುಕ್ತರ ಪತ್ರದಂತೆ ಮೈಶುಗರ್ ವ್ಯವಸ್ಥಾಪಕ ನಿರ್ದೇಶಕರಿಗೆ 2022 ಫೆ.16 ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಂದಿನ ಸರ್ಕಾರದ ಕಾರ್ಯದರ್ಶಿಗಳು ಪತ್ರ ಬರೆದಿದ್ದರು.

ನಾಗರಾಜಪ್ಪ ವಿರುದ್ಧದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಮೈಷುಗರ್ ಗೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕು. ಸಕ್ಷಮ ಪ್ರಾಧಿಕಾರದ ವಿರುದ್ಧ ಸಿವಿಲ್ ದಾವೆ ಹೂಡಬೇಕೆಂಬುದು ಸೇರಿದಂತೆ ನಾಲ್ಕು ಪ್ರಮುಖ ನಿರ್ದೇಶನವನ್ನು ಸರ್ಕಾರದ ವಾಣಿಜ್ಯ ಇಲಾಖೆ ಕಾರ್ಯದರ್ಶಿಗಳು ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿದ್ದ ಪತ್ರದಲ್ಲಿ ನಿರ್ದೇಶನ ನೀಡಿದ್ದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜಕೀಯ ಕಾರಣಗಳು ಹಾಗೂ ಪ್ರಭಾವಿಗಳ ಒತ್ತಡದಿಂದಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಸಂಬಂಧ ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘವು ಹೋರಾಟ ನಡೆಸಿ, ನಾಗರಾಜಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು.

ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ , ಕಬಿಜೆಪಿ ಪಕ್ಷ ಮತ್ತು ಬಿಜೆಪಿ ನಾಯಕರನ್ನು ಹಣಿಯಲು ನಾನಾ ರೀತಿಯಲ್ಲಿ ಕಸರತ್ತು ನಡೆಸುತ್ತಿರುವ ವೇಳೆಯಲ್ಲಿ ಮೈಷುಗರ್ ನಲ್ಲಿ ನಡೆದಿದ್ದ ಅವ್ಯವಹಾರದ ಪ್ರಕರಣದ ತನಿಖೆ, ಕಾನೂನು ಕ್ರಮಗಳು ಚುರುಕಾದ ನಂತರ ನಾಗರಾಜಪ್ಪನ ಅಧಿಕಾರಾವಧಿಯಲ್ಲಿ ಕಂಪನಿಗೆ ಆಗಿರುವ ನಷ್ಟವನ್ನು ಕಾರ್ಖಾನೆಗೆ ಆದ ನಷ್ಠ ವಸೂಲಿ ಮಾಡಲು ನಾಗರಾಜಪ್ಪ ವಿರುದ್ದ ಸಿವಿಲ್ ದಾವೆ ಹೂಡಲು ನಿರ್ಧರಿಸಿದೆ.

ಮಂಡ್ಯ ಡಿಸಿಗೆ ಪತ್ರ :

ಕಾನೂನು ಕ್ರಮದ ಭಾಗವಾಗಿ ಮೈಷುಗರ್ ಎಂಡಿ ಎಂ ಆರ್ ರವಿಕುಮಾರ್ 2023 ರ ಡಿಸೆಂಬರ್ 30 ರಂದು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಾಗರಾಜಪ್ಪನಿಗೆ ಹಾಗೂ ಮತ್ತವರ ಕುಟುಂಬದವರ ಹೆಸರಿನಲ್ಲಿ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿರುವ ಸ್ಥಿರಾಸ್ಥಿ ಮತ್ತು ಚರಾಸ್ಥಿಗಳ ಮಾಹಿತಿಯನ್ನು ಕ್ರೂಢೀಕರಿಸಬೇಕಿದೆ. ಇವರಿಗೆ ಸಂಬಂಧಿಸಿದಂತೆ ಕೃಷಿ ಜಮೀನು, ಕೃಷಿಯೇತರ ಆಸ್ತಿ, ನಿವೇಶನ, ಮನೆ, ಕಟ್ಟಡಗಳು/ವಾಣಿಜ್ಯ ಸಂಕೀರ್ಣ, ವಾಹನಗಳು, ಬ್ಯಾಂಕಿನಲ್ಲಿರುವ ನಗದು/ಠೇವಣಿಗಳು, ಷೇರುಪತ್ರಗಳು, ಡಿಬೆಂಚರುಗಳು, ಹಕ್ಕುಪತ್ರಗಳು ಹಾಗೂ ಇತ್ಯಾದಿ ಮಾಹಿತಿಯನ್ನು ದಾಖಲೆಗಳೊಂದಿಗೆ ನೀಡುವಂತೆ ಕೋರಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ನಾಗರಾಜಪ್ಪನ ಕೊರಳಿಗೆ ಕಾನೂನಿನ ಕುಣಿಕೆ ಸುತ್ತಿಕೊಳ್ಳುವುದು ನಿಶ್ಚಿತ ಎನ್ನುತ್ತಾರೆ ಮೈಷುಗರ್ ಅಧಿಕಾರಿಗಳ ಮೂಲಗಳು

WhatsApp Image 2024 01 04 at 7.40.51 PM

ಡಿಸಿ ತುರ್ತು ಕ್ರಮ

ಮೈಷುಗರ್ ಎಂಡಿ ಬರೆದ ಪತ್ರಕ್ಕೆ ಜಿಲ್ಲಾಧಿಕಾರಿ ಡಾ ಕುಮಾರ್ ತುರ್ತು ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ.

Share This Article
Leave a comment