February 22, 2026

Newsnap Kannada

The World at your finger tips!

toyoto

ಟಯೋಟಾ : ಅಮಾನತ್ತುಗೊಂಡ ಕಾರ್ಮಿಕರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳವಂತೆ ಸಚಿವರ ಮನವಿ

Spread the love

ರಾಮನಗರ ಜಿಲ್ಲೆಯ ಬಿಡದಿ ಟಯೋಟಾ ಕಿಲೋಸ್ಕರ್ ಕಾರ್ಖಾನೆಯಲ್ಲಿ ಅಮಾನತ್ತು ಗೊಂಡಿರುವ 70 ಮಂದಿ ಕಾರ್ಮಿಕರಿಗೆ ಕ್ಷಮೆ ನೀಡಿ ಅವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಡಳಿತ ಮಂಡಳಿಯಲ್ಲಿ ವಿನಂತಿ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ತಿಳಿಸಿದರು.

ಬಿಡದಿಯಲ್ಲಿರುವ ಟಯೋಟಾ ಕಿರ್ಲೋಸ್ಕರ್ ಕಂಪನಿಗೆ ಗುರುವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಭೇಟಿ ನೀಡಿ ಕಾರ್ಮಿಕರ ಯೂನಿಯನ್ ಹಾಗೂ ಮ್ಯಾನೇಜ್‌ಮೆಂಟ್ ಅವರೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದರು.

ಕೈಗಾರಿಕೆ ಇಲಾಖೆಯು ಕೈಗಾರಿಕೆಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ಕೈಗಾರಿಕೆಗಳು ತನ್ನ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ನ್ಯಾಯಬದ್ಧವಾಗಿ ನೀಡಿದೆ. ಆದರಿಂದ ಅಮಾನತ್ತುಪಡಿಸಿದ ಸಿಬ್ಬಂದಿಯನ್ನು ಪುನಃ ಕೆಲಸಕ್ಕೆ ಪಡೆದುಕೊಳ್ಳುವಂತೆ ಸಚಿವರಾದರೂ ಕಾರ್ಖಾನೆ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಆಡಳಿತ ಮಂಡಳಿಗೆ ಮುಚ್ಚಳಿಕೆ ನೀಡಬೇಕು ಎಂದು ಕಾರ್ಮಿಕರ ಮೇಲೆ ಹೇರಿರುವ ಒತ್ತಡ ಸರಿಯಿಲ್ಲ. ಕಾರ್ಮಿಕರು ಕೆಲಸಕ್ಕೆ ಸೇರುವಾಗ ಮುಚ್ಚಳಿಕೆ ನೀಡಿರುತ್ತಾರೆ. ಪುನಃ ಪಡೆಯಲು ಕಾರ್ಖಾನೆ ಅವರಿಗೆ ಅವಕಾಶವಿಲ್ಲ ಆದರಿಂದ ಕಾರ್ಮಿಕರಿಂದ ಪುನಃ ಮುಚ್ಚಳಿಕೆ ಪ್ರಕ್ರಿಯೆಯನ್ನು ವಾಪಸ್ಸು ಪಡೆಯುವಂತೆ ಆದೇಶಿಸಲಾಗಿದೆ.

ಕಾರ್ಖಾನೆಯಲ್ಲಿ ಅವರು ನಾಳೆಯ ವರೆಗೆ ಕಾಲಾವಕಾಶ ಕೋರಿರುತ್ತಾರೆ ಎಂದರು.

ಕಾರ್ಯಕರ್ತರು ಹೇಳಿದನ್ನೆಲ್ಲಾ ತೀರ್ಮಾನ ಆಗಬಾರದು. ಆಲೋಚನೆ ಮಾಡಿ ತೀರ್ಮಾನ ಕೈಗೊಳ್ಳುವವರೇ ನಾಯಕರಾಗುತ್ತಾರೆ. ಇದನ್ನು ಕಾರ್ಮಿಕ ಯುನಿಯನ್ ಮುಖಂಡರು ರೂಡಿಸಿಕೊಳ್ಳಬೇಕು. ಒಳ್ಳೆಯ ಕಾರ್ಖನೆಯಲ್ಲಿ ಉದ್ಯೋಗ ಪಡೆದುಕೊಳ್ಳುವುದು ಕಷ್ಟಕರವಾಗಿರುತ್ತದೆ. ಉದ್ಯೋಗವನ್ನು ಉಳಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಕಾರ್ಮಿಕರು ೮೬ ದಿನದ ಹೋರಾಟ ನಡೆಸುತ್ತಿದ್ದಾರ. ಇದನ್ನು ಪರಿಹರಿಸಲು ಮ್ಯಾನೇಜ್‌ಮೆಂಟ್, ಕಾರ್ಮಿಕರ ಯುನಿಯನ್ ಹಾಗೂ ಅಧಿಕಾರಿಗಳೊಂದಿಗೆ ೧೨ ಸಭೆಗಳನ್ನು ನಡೆಸಲಾಗಿದೆ. ಇಂದು ಮ್ಯಾನೇಜ್‌ಮೆಂಟ್ ಅವರೊಂದಿಗೆ ನಡೆಸಿದ ಚರ್ಚೆ ಹಾಗೂ ಕಾರ್ಮಿಕರ ತೊಂದರೆಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು ಎಂದರು.

ಕಾರ್ಮಿಕ ಇಲಾಖೆ ಇರುವುದು ಕಾರ್ಮಿಕರ ರಕ್ಷಣೆಗಾಗಿ, ಕಾರ್ಮಿಕರ ಹಕ್ಕುಗಳಿಗೆ ತೊಂದರೆ ಬಂದರೆ ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ಮೈಸೂರಿನಲ್ಲಿ ಮುಚ್ಚಲಾದಂತಹ ರೀಡ್ ಎಂಡ್ ಟೈಲರ್ ಕಾರ್ಖನೆ ಹಾಗೂ ಏಷಿಯನ್ ಪ್ಯಾಂಟ್ಸ್ ಕಾರ್ಖನೆಯನ್ನು ಚರ್ಚೆ ನಡೆಸಿ ಪುನಾರಾರಂಭ ಮಾಡಿ ಸುಖಾಂತ್ಯವಾಗಿದೆ. ಅದೇ ರೀತಿ ಇಲ್ಲಿಯ ಸಮಸ್ಯೆಯು ಪರಿಹಾರವಾಗಿ ಸುಖಾಂತ್ಯವಾಗಲಿ ಎಂದು ಶುಭ ಹಾರೈಸಿದರು.

ಸಭೆಯಲ್ಲಿ ಶಾಸಕರಾದ ಎ. ಮಂಜುನಾಥ, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!