ಸ್ವಾಯತ್ತ ಸಂಸ್ಥೆಗಳ ಕುತ್ತಿಗೆಗಳು ನೇತಾಡುತ್ತಿವೆ: ದೇವನೂರು

Team Newsnap
1 Min Read

ಕೇಂದ್ರ ಸರ್ಕಾರವು ಜಿಎಸ್‌ಟಿ ಮೂಲಕ ರಾಜ್ಯಗಳನ್ನು ಭಿಕ್ಷೆ ಕೇಳುವ ಪರಿಸ್ಥಿತಿಗೆ ದೂಡಿದೆ. ದೇಶದಲ್ಲಿ ಒಕ್ಕೂಟ ಸ್ವರೂಪ ಇದೆಯೇ ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದು ಖ್ಯಾತ ಸಾಹಿತಿ ದೇವನೂರ ಮಹಾದೇವ ಅವರು ಆತಂಕ ವ್ಯಕ್ತಪಡಿಸಿದ್ದಾರೆ.


ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ ಮೈಸೂರಿನಲ್ಲಿ ಇಂದು ನಡೆದ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ, ಆರ್‌ಎಸ್‌ಎಸ್- ಬಿಜೆಪಿಯ ದುರಾಡಳಿತದ ವಿರುದ್ಧ ಜನಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿ, ನಿಜಕ್ಕೂ ಇಂದು ರಾಜ್ಯಗಳಿಗೆ ಅಸ್ತಿತ್ವ ಇದೆಯಾ ಎಂಬ ಪ್ರಶ್ನೆ ಮೂಡಲಿದೆ ಎಂದರಲ್ಲದೆ ರಾಜ್ಯಗಳು ಪಕ್ಷಾತೀತವಾಗಿ ಎಚ್ಚರಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರವು ಸಂವಿಧಾನವನ್ನು ಒಪ್ಪದೇ ತನ್ನದೇ ಆದ ಸಂವಿಧಾನವೊಳಗಿಟ್ಟುಕೊಂಡು ಆಡಳಿತ ನಡೆಸುತ್ತಿದೆ ಎಂದು ದೂರಿದರಲ್ಲದೆ, ಕೇಂದ್ರವು ಸ್ವಾಯತ್ತ ಸಂಸ್ಥೆಗಳ ಕುತ್ತಿಗೆಯ ನರ ಕತ್ತರಿಸಿದ್ದು, ಅವುಗಳ ಕುತ್ತಿಗೆಗಳು ನೇತಾಡುತ್ತಿವೆ ಎಂದು ಕಿಡಿಕಾರಿದರು.


ಸಾಮಾಜಿಕ ನ್ಯಾಯವನ್ನು ಅಂಗಾತ ಮಲಗಿಸಿ ಬಿಟ್ಟ ಕೇಂದ್ರ ಸರ್ಕಾರ, ಆರ್ಥಿಕವಾಗಿ ದುರ್ಬಲರೆಂಬ ಹೆಸರಲ್ಲಿ ಮೀಸಲು ನೀಡಿ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಕಲ್ಪನೆಯನ್ನೇ ನೆಲಕಚ್ಚಿಸಿಬಿಟ್ಟಿದೆ ಎಂದು ಅವರು ಕಟುವಾಗಿ ದೇವನೂರು ಟೀಕಿಸಿದರು.


ಹಗಲು ರಾತ್ರಿಯೆನ್ನದೆ ತೀವ್ರವಾದ ಚಳಿಯಲ್ಲಿ ರೈತರು ಒಂದು ವಾರದಿಂದ ದೆಹಲಿಯಲ್ಲಿ ಚಳವಳಿ ನಡೆಸುತ್ತಿದ್ದರೂ ಕೇಂದ್ರ ಸರ್ಕಾರವು ಮಾತುಕತೆಯಲ್ಲಿ ವಂಚಿಸಿದೆ ಎಂದು ಆರೋಪಿಸಿ, ಇದು ಸರ್ಕಾರದ ಪೈಶಾಚಿಕ ನಡೆ ಎಂದರು.

Share This Article
Leave a comment