February 25, 2026

Newsnap Kannada

The World at your finger tips!

election , politics , JDS

ಜೀವ ಮಣ್ಣಿಗೆ ಹೋಗುವವರೆಗೂ ಮಂಡ್ಯ ಜಿಲ್ಲೆಗೆ ಪದೇ ಪದೇ ಬರುವೆ: ಹೆಚ್‍ ಡಿ ಕೆ

Spread the love

ಜೀವ ಮಣ್ಣಿಗೆ ಹೋಗುವವರೆಗೂ ಮಂಡ್ಯ ಜಿಲ್ಲೆಗೆ ಬರುತ್ತೇನೆ. ನನಗೆ ಗೌರವ ಕೊಟ್ಟಿರುವ ಲಕ್ಷಾಂತರ ಜನ ಮಂಡ್ಯ ಜಿಲ್ಲೆಯಲ್ಲಿದ್ದಾರೆ ಎಂದು‌ ಮಾಜಿ ಮುಖ್ಯಮಂತ್ರಿ ಹೆಚ್‍.ಡಿ ಕುಮಾರಸ್ವಾಮಿ ತಿಳಿಸಿದರು.‌

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನ್‍ಮುಲ್ ಹಗರಣ ಮುಚ್ಚಿಹಾಕಲು ದೇವೇಗೌಡರು, ಕುಮಾರಸ್ವಾಮಿ ಸಿಎಂ ಜೊತೆ ಮಾತನಾಡಿದ್ದಾರೆಂಬ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

ನಾನು, ದೇವೇಗೌಡರು ಸಿಎಂ ಜೊತೆ ಮಾತನಾಡಿದ್ದೇವೆ. ನೀವು ಯಾವ ತನಿಖೆಯಾದರೂ ಮಾಡಿಕೊಳ್ಳಿ.  ಹಗರಣ ಬಯಲಿಗೆಳೆದ ಆಡಳಿತ ಮಂಡಳಿ ವಿರುದ್ಧವೇ ಕ್ರಮ ಯಾಕೆ ಎಂದು ಸಿಎಂಗೆ ಹೇಳಿದ್ದೇವೆ. ನನ್ನ ಬಡ್ಡಿ ಮಗ ಎನ್ನುತ್ತಾರಲ್ಲ, ಅವರು ನಮಗೆ ಬಡ್ಡಿ ಕೊಡುವುದಿರಲಿ ನಾನು ಕೊಟ್ಟ ಅಸಲೇ ವಾಪಸ್ ಕೊಟ್ಟಿಲ್ಲ ಎಂದು ಗರಂ ಆಗಿ ಹೇಳಿದರು.‌

ನಾನೇ ಸಿಎಂಗೆ ಹೇಳಿ ಟೈಂ ನಿಗದಿ ಮಾಡ್ತೀನಿ. ಈ ವಯಸ್ಸಿನಲ್ಲಿ
ದೇವೇಗೌಡರು ಯಾಕೆ ಆ ಮಾಹಾನುಭಾವನೇ ಕರೆದುಕೊಂಡು ಹೋಗಲಿ. ಹಗರಣ ಹೊರತಂದಿದ್ದೇ ಈ ಆಡಳಿತ ಮಂಡಳಿ. ಇವರಿಗೆ ಮಾನ ಮರ್ಯಾದೆ ಇದ್ದರೆ ಹಗರಣದ ತನಿಖೆ ನಡೆಸೋ ಬಗ್ಗೆ ಮಾತನಾಡಲಿ. ಇವರ ಅಪ್ಪಣೆ ತಗೊಂಡು ನಾನು ಮಂಡ್ಯಕ್ಕೆ ಬರಬೇಕಿಲ್ಲ ಎಂದು ಕಿಡಿಕಾರಿದರು.

ನನ್ನ ಜನ ಬಡವರಿದ್ದಾರೆ, ಈ ಜಿಲ್ಲೆಯ ಜನ ಋಣ ಹೊರಿಸಿದ್ದಾರೆ. ನನಗೆ ಗೌರವ ಕೊಟ್ಟಿರುವ ಲಕ್ಷಾಂತರ ಜನ ಇಲ್ಲಿದ್ದಾರೆ. ಜೀವ ಮಣ್ಣಿಗೋಗೊವರೆಗೂ ಮಂಡ್ಯ ಜಿಲ್ಲೆಗೆ ಬರ್ತೀನಿ. ಮಾತನಾಡುವಾಗ ಎಚ್ಚರಿಕೆ ಇರಲಿ. ಏನ್ ಇವರ ಋಣ ತಿಂದಿದ್ದವಾ, ಹಲ್ಲು ಹಿಡಿದು ಮಾತನಾಡಲಿ. ಸೋತು ಮನೆಯಲ್ಲಿ ಮಲಗಿದ್ದಾಗ ಎಂಪಿ ಮಾಡಿದೆ. ಸ್ವಂತ ದುಡಿಮೆಯಲ್ಲಿ ಪಾರ್ಲಿಮೆಂಟ್ ಗೆ ಹೋಗಿದ್ದರೆ ಇವರು ಎಂದು ಚಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲಿಯೇ ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ದಲಿತ ಸಿಎಂ ಮಾಡಲಿ:

ಇದೇ ವೇಳೆ ದಲಿತರಿಗೆ ಸಿಎಂ ಹುದ್ದೆ ತಪ್ಪಿಸಿದ್ದು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ ಹೆಚ್‍ಡಿಕೆ, ದಲಿತರನ್ನು ಸಿಎಂ ಮಾಡಬೇಕು ಎಂದು ಈವರೆಗೆ ಕಾಂಗ್ರೆಸ್ ನವರಿಗೆ ಗೊತ್ತಿರಲಿಲ್ವ…? ಸ್ವಾತಂತ್ರ್ಯ ಬಂದ ಬಳಿಕ 60 ವರ್ಷ ರಾಜ್ಯ ಆಳಿದಾಗ ಗೊತ್ತಾಗಲಿಲ್ವ. ಈಗ ದಲಿತರ ಹೆಸರು ಬರ್ತಿದೆಯಾ? ದಲಿತರು ಸಿಎಂ ಆಗೋದನ್ನು ನಾನು ತಪ್ಪಿಸಲಿಲ್ಲ. ದಲಿತರನ್ನು ಸಿಎಂ ಆಗುವುದನ್ನು ತಪ್ಪಿಸಿದ್ದೇ ಈಗ ಮತ್ತೆ ಸಿಎಂ ಆಗಬೇಕು ಎಂದು ಹೇಳಿಕೊಳ್ಳುತ್ತಿದ್ದಾರಲ್ಲ ಅವರು. ಯಾರೂ ಮಾಡದೇ ಇರುವ ಸಾಧನೆ ಮಾಡಿ, ನಾನಿದ್ದರೇ ಕಾಂಗ್ರೆಸ್ ಅಂತ ಹೇಳ್ತಾರಲ್ಲ. 130 ಸೀಟಿನಲ್ಲಿ ಮುಖ್ಯಮಂತ್ರಿಯಾಗಿ 78ಕ್ಕೆ ಬಂದರಲ್ಲ ಅವರು ದಲಿತ ಸಿಎಂ ಆಗೋದನ್ನು ತಪ್ಪಿಸಿದ್ದು ಹೇಳಿಕೆ. ದಲಿತರು ಸಿಎಂ ಆಗೋದನ್ನು ತಪ್ಪಿಸಿದ್ದೇ ಸಿದ್ದರಾಮಯ್ಯ ಎಂದು ಹೆಸರೇಳದೇ ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

error: Content is protected !!