ಹಸಿರು ಪಟಾಕಿ ಮತ್ತು ಕಡಿಮೆ ಮಾಲಿನ್ಯಕಾರಕ ವಸ್ತುಗಳನ್ನು ಬಳಸಿ ತಯಾರಿಸಿದ ಪಟಾಕಿಗಳನ್ನು ದೀಪಾವಳಿ ಹಬ್ಬದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಕೋವಿಡ್ ಸಾಂಕ್ರಾಮಿಕ ಹಾಗೂ ವಾಯುಮಾಲಿನ್ಯದ ನಡುವೆ ಪಟಾಕಿ ಸಂಪೂರ್ಣ ನಿಷೇಧಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಹೇಳಿತ್ತು.
ಈ ಆದೇಶವನ್ನು ಪ್ರಶ್ನಿಸಿ ಪಟಾಕಿ ಉತ್ಪಾದಿಸುವ ಕಂಪನಿಗಳು ಸುಪ್ರೀಂ ಮೊರೆ ಹೋಗಿದ್ದವು. ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಆಗುವುದಿಲ್ಲ. ದುರುಪಯೋಗವನ್ನು ತಡೆಯಲು ಕಾರ್ಯವಿಧಾನವನ್ನು ಬಲಪಡಿಸಿ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ಅಜಯ್ ರಸ್ತೋಗಿಅವರಿದ್ದ ಪೀಠ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿಷೇಧಿತ ಪಟಾಕಿ ಮತ್ತು ಸಂಬಂಧಿತ ವಸ್ತುಗಳನ್ನು ರಾಜ್ಯದಲ್ಲಿ ಆಮದು ಮಾಡಿಕೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳುವ ಸಾಧ್ಯತೆ ಕುರಿತು ಪರಿಶೀಲಿಸುವಂತೆ ಸೂಚಿಸಿತು.