February 22, 2026

Newsnap Kannada

The World at your finger tips!

neet,pg,exam

NEET-PG 2021 - Counseling for 1,456 seats only: Supreme

ಡಿನೋಟಿಫಿಕೇಷನ್ ಪ್ರಕರಣ ಸಿಎಂ ವಿರುದ್ಧ ವಿಚಾರಣೆಗೆ ಸುಪ್ರೀಂ ತಡೆಯಾಜ್ಞೆ

Spread the love

ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಬೆಂಗಳೂರಿನ ಬೆಳ್ಳಂದೂರು ಬಳಿಯ ಭೂಮಿ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ಸಿಜೆಐ ಪೀಠ ತಡೆಯಾಜ್ಞೆ ನೀಡಿದೆ.

ಇದೇ ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಪ್ರಕರಣ ರದ್ದುಪಡಿಸಲು ನಿರಾಕರಿಸಿತ್ತು.

ಐಟಿ ಯೋಜನೆಯೊಂದಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದ ಆರೋಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಕೇಳಿಬಂದಿತ್ತು.

ನಂತರ ಲೋಕಾಯುಕ್ತ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ ಆದೇಶ ನೀಡಿತ್ತು.

ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಸಿಎಂ ಯಡಿಯೂರಪ್ಪ ವಿರುದ್ಧ 2011ರಲ್ಲಿ ಅಲಂ ಪಾಷಾ ದೂರು ಸಲ್ಲಿಸಿದ್ದರು.

ಅಲ್ಲದೇ ಈ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ ಜತೆ ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಹ ಆರೋಪ ಎದುರಿಸಿದ್ದರು.

ಬೆಂಗಳೂರು ಉತ್ತರ ಜಾಲ ಹೋಬಳಿಯ ಹೂವಿನಾಯಕಹಳ್ಳಿಯಲ್ಲಿ ಕೆಐಎಡಿಬಿ ಸುಮಾರು 20 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.

ಸಿಎಂ ಯಡಿಯೂರಪ್ಪ ವಿರುದ್ದ ಆರೋಪಗಳೇನು?:

ಬೆಂಗಳೂರು ಉತ್ತರ ತಾಲೂಕು ಜಾಲ ಹೋಬಳಿಯ ಹೂವಿನಾಯಕಹಳ್ಳಿಯಲ್ಲಿನ ಕೆಐಎಡಿಬಿಗೆ ಸೇರಿದ್ದ 20 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಟ್ಟ ಆರೋಪ ಬಿ.ಎಸ್.ಯಡಿಯೂರಪ್ಪ ಅವರ ಮೇಲಿತ್ತು. ಹಾರ್ಡ್‌ವೇರ್‌ ಪಾರ್ಕ್‌ನ ಮಧ್ಯಭಾಗದ ಜಮೀನನ್ನು ಭೂ ಮಾಲೀಕರಿಗೆ ಡಿನೋಟಿಫಿಕೇಷನ್‌ ಮಾಡಿದ ಆರೋಪವಿತ್ತು. ಭೂಸ್ವಾಧೀನಗೊಂಡು ನಿವೇಶನ ಅಭಿವೃದ್ಧಿ ಪಡಿಸಿದ ಬಳಿಕವೂ ನಿಯಮ ಪಾಲಿಸದೇ ಡಿನೋಟಿಫಿಕೇಷನ್‌ ಮಾಡಿ ಸರ್ಕಾರದ ಬೊಕ್ಕಸಕ್ಕೆ 6 ಕೋಟಿ ರೂಪಾಯಿ ನಷ್ಟವುಂಟು ಮಾಡಿದ ಆರೋಪ ಕೇಳಿಬಂದಿತ್ತು.

ಒಂದು ದಶಕದ ಹಿಂದಿನ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪರಿಗೆ ನಿಟ್ಟುಸಿರು ಬಿಡುವಂತಹ ಆದೇಶವನ್ನು ಸರ್ವೋಚ್ಛ ನ್ಯಾಯಾಲಯ ನೀಡಿದೆ.

error: Content is protected !!