‘ಕಿರಿಕ್ ಪಾರ್ಟಿ’ ಮೂಲಕ 2016ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಂಯುಕ್ತಾ ಹೆಗಡೆ ಸಿನಿಮಾಕ್ಕಿಂತ ಹೆಚ್ಚಾಗಿ ಉಳಿದ ವಿಚಾರದಲ್ಲಿಯೇ ಹೆಚ್ಚು ಸದ್ದು ಮಾಡಿದರು.
ಅದ್ಭುತ ನೃತ್ಯಗಾರ್ತಿಯಾಗಿರುವ ಸಂಯುಕ್ತಾ ಹೆಗಡೆ ಸಿನಿಮಾ ವಿಚಾರದಲ್ಲಿ ವಿವಾದ ಮಾಡಿಕೊಂಡರು, ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಕಿರಿಕ್ ಮಾಡಿಕೊಂಡರು. ಇವೆಲ್ಲವುಗಳ ಹೊರತಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಇನ್ಸ್ಟಾಗ್ರಾಮ್ನಲ್ಲಿ ನೆಟ್ಟಿಗರ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ನೃತ್ಯ ಅಥವಾ ಕೆಲಸ?
ನೃತ್ಯ ನನ್ನ ಜೀವನ, ನಟನೆ ನನ್ನ ವೃತ್ತಿ. ನನ್ನ ಕೆಲಸವನ್ನು ನಾನು ಪ್ರೀತಿಸುತ್ತೇನಾದರೂ ಕೂಡ ಜೀವನದಷ್ಟಲ್ಲ.
ನೀವು ನಾಳೆ ಮದುವೆಯಾಗುತ್ತೀರೋ ಅಥವಾ ಇಂದು ಸಿಂಗಲ್ ಆಗಿ ಸಾಯುತ್ತೀರೋ?
ಸಿಂಗಲ್ ಆಗಿ ಸಾಯುತ್ತೇನೆ. 10000 ಅಪರಿಚಿತ ಮಂದಿ ಮದುವೆಗೆ ಬಂದು ಆಹಾರದ ಬಗ್ಗೆ ವಿಮರ್ಶೆ ಮಾಡೋದು ನನಗೆ ಇಷ್ಟವಿಲ್ಲ. ಹೌದು, ನನ್ನನ್ನು ನಾಳೆ ಯಾರೆ ಮದುವೆಯಾಗುತ್ತಾರೆ?
ದೀಪಾವಳಿ ಅಥವಾ ಗೌರಿ ಗಣೇಶ?
ದೀಪಾವಳಿ ಅಂದರೆ ದೀಪಗಳ ಸಂಭ್ರಮ. ದೀಪಾವಳಿ ಅಂದರೆ ವಾಯುಮಾಲಿನ್ಯ, ಗಣೇಶ ಚತುರ್ಥೀ ಅಂದರೆ ಜಲಮಾಲಿನ್ಯ. ಹೀಗಾಗಿ ಇವೆರಡು ಅಲ್ಲದೆ ನನಗೆ ಹಬ್ಬಗಳಿಗೆ ನೀಡುವ ರಜಾ ಅಂದರೆ ತುಂಬ ಇಷ್ಟ. ನನ್ನ ಪಾಲಕರು ಲವ್ ಮಾಡಿ ಅಂತರ್ಧರ್ಮೀಯ ಮದುವೆಯಾಗಿದ್ದಾರೆ. ಇಷ್ಟು ವರ್ಷಗಳ ಕಾಲ ನಾನು ಹಲವು ಹಬ್ಬಗಳನ್ನು ನೋಡಿದ್ದೇನೆ, ಆಚರಿಸಿದ್ದೇನೆ. ಎಲ್ಲರೂ ಒಟ್ಟಾಗಿ ಹಬ್ಬಗಳನ್ನು ಆಚರಿಸುವುದು ಖುಷಿ ಕೊಡುತ್ತದೆ. ಆದರೆ ಪಟಾಕಿ ಸಿಡಿಸಿ ಅಥವಾ ಇನ್ನಾವುದರಿಂದ ಯಾವುದೇ ಮಾಲಿನ್ಯ ಮಾಡಬಾರದು. ದೇವರು ಕೂಡ ಮಾಲಿನ್ಯ ಮಾಡಿ ಅಂತ ಕೇಳೋದಿಲ್ಲ ಎಂದು ನಾನು ಭಾವಿಸುತ್ತೇನೆ.
ನಟಿ ಸಂಯುಕ್ತಾ ಹೆಗಡೆ ಅವರು ಕೆಲ ದಿನಗಳ ಹಿಂದೆ ಅವರ ಕಾಂತಿಯುತ ಚರ್ಮದ, ಫಿಟ್ನೆಸ್ ರಹಸ್ಯ ತಿಳಿಸಿಕೊಟ್ಟಿದ್ದರು. ಕೆಲ ದಿನಗಳ ಹಿಂದೆ ಬೆಂಗಳೂರಿನ ಅಗರ ಉದ್ಯಾನವನದಲ್ಲಿ ನಟಿ ಸಂಯುಕ್ತಾ ಸ್ಪೋರ್ಟ್ಸ್ ಡ್ರೆಸ್ ಧರಿಸಿ, ವರ್ಕೌಟ್ ಮಾಡುತ್ತಿದ್ದರು. ಆಗ ಇದನ್ನು ಕಂಡ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ, ಸಂಯುಕ್ತಾ ಹಾಗೂ ಅವರ ಸ್ನೇಹಿತರ ಮೇಲೆ ದೌರ್ಜನ್ಯ ನಡೆಸಿದ್ದರು. ಈ ಬಗ್ಗೆ ಆಮೇಲೆ ಕವಿತಾ ರೆಡ್ಡಿ ಕ್ಷಮೆ ಕೇಳಿದ್ದರು.