January 28, 2026

Newsnap Kannada

The World at your finger tips!

sa ra mahesh

ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ ಸಾ ರಾ

Spread the love

ನಮ್ಮ ರಾಜ್ಯದ ಹಣ ಬೇರೆಯವರ ಪಾಲಾಗುತ್ತಿದೆ. ಇದಕ್ಕೆ ರೋಹಿಣಿ ಸಿಂಧೂರಿಯವರೇ ಕಾರಣ ಎಂದು ಕೆ.ಆರ್.ನಗರದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ನೂತನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಾ ರಾ ಮಹೇಶ್, ತಾವು ಆರೋಪಿಸುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಿ ‘ಮೈಸೂರಿನ ಮಹಾರಾಜರು ಕರ್ನಾಟಕ ಸರ್ಕಾರಕ್ಕೆ 7 ಎಕರೆ ನಿವೇಶನ ನೀಡಿದ್ದರು. ಆ ಜಾಗದಲ್ಲಿ ಸರ್ಕಾರ ಒಂದು ಸಂಕೀರ್ಣ ನಿರ್ಮಾಣ ಮಾಡಲು 200 ರು ಕೋಟಿಯನ್ನೂ ಬಿಡುಗಡೆ ಮಾಡಿತ್ತು. ಈಗ ತಿರುಪತಿಯ ಟಿಟಿಡಿ ಸಂಕೀರ್ಣ ಕಾಮಗಾರಿಯ ನಿರ್ಮಾಣ ಮತ್ತು ಉಸ್ತುವಾರಿಯನ್ನು ವಹಿಸಿಕೊಂಡಿದೆ. ಕಟ್ಟಡದ ಒಳಾಂಗಣ ವಿನ್ಯಾಸ ಮತ್ತು ವಾಸ್ತುಶಿಲ್ಪ ಕೆಲಸಗಳ ಗುತ್ತಿಗೆಯನ್ನು ಮೈ.ಗಾಯತ್ರಿ ಅಂಡ್ ನಮಿತ್ ಆರ್ಕಿಟೆಕ್ಟ್‌ಗೆ ನೀಡಲಾಗಿದೆ. ಈ ಕೆಲಸಗಳ ಸಂಬಂಧ ಆರ್ಕಿಟೆಕ್ಟ್ ಕಂಪನಿಗೆ 1998ರ ಅನ್ವಯ 10 ಕೋಟಿಯ ವಿನಾಯ್ತಿ ನೀಡಲಾಗಿದೆ. ಹಾಗಾದರೆ‌ 10 ಕೋಟಿ ಎಲ್ಲಿ ಹೋಯಿತು?ಈ ಕೃತ್ಯದ ಹಿಂದೆ ಅಂದು ಮುಜರಾಯಿ ಇಲಾಖೆಯ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿಯವರ ಪಾತ್ರವಿದೆ’ ಎಂದು ಆರೋಪಿಸಿದರು.

ಹಾಗೆಯೇ ಶ್ರವಣ ಬೆಳಗೋಳ ಹಗರಣದ ಬಗ್ಗೆ ಮಾತನಾಡಿದ ಅವರು ‘ರೋಹಿಯವರು ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗ ಶ್ರವಣ ಬೆಳಗೋಳದ ಮಹಾಮಸ್ತಾಭಿಷೇಕಕ್ಕೆ 175 ಕೋಟಿ ಹಣ ಬಿಡುಗಡೆ ಮಾಡಿದ್ದರು. ಆದರೆ ಇದರಲ್ಲೂ ಅನೇಕ ಹಗರಣಗಳಾಗಿವೆ. ಸದ್ಯದಲ್ಲೇ ದಾಖಲೆಗಳೊಂದಿಗೆ ನಿಮ್ಮ ಮುಂದೆ ಬರುತ್ತೇನೆ’ ಎಂದರು.

ವರ್ಗಾವಣೆಯ ಕುರಿತು ಸದ್ಯ ಎದ್ದಿರುವ ವಿವಾದದ ಕುರಿತು ಮಾತನಾಡಿರುವ ಅವರು ‘ಈಗ ರಾಜ್ಯದಲ್ಲಿ ವರ್ಗಾವಣೆಯ ದಂಧೆಯೇ ಪ್ರಾರಂಭವಾಗಿದೆ. ಒಂದು ಕಡೆ ವರ್ಗವಾಗಬೇಕೆಂದರೆ 20 ಲಕ್ಷ ಲಂಚ ನೀಡಬೇಕು ಎಂದು ಅನೇಕ ಅಧಿಕಾರಿಗಳು ನನ್ನ ಬಳಿ ಹೇಳಿದ್ದಾರೆ’ ಎಂದು ಆರೋಪಿಸಿದರು.

error: Content is protected !!