February 18, 2026

Newsnap Kannada

The World at your finger tips!

stone peltation

ಮೈಸೂರಿನಲ್ಲಿ ಗಲಭೆ: ನಿಷೇಧಿತ ಸಂಘಟನೆಗಳ ಕೈವಾಡ ಶಂಕೆ

Spread the love

ಮೈಸೂರು: ಮೈಸೂರಿನ ಕಲ್ಯಾಣಗಿರಿ ಪ್ರದೇಶದಲ್ಲಿ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಧರ್ಮಗುರುಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರಿಂದ ಗಲಭೆ ಸ್ಫೋಟಗೊಂಡಿತ್ತು. ಇದರಿಂದ ಕೋಪಗೊಂಡ ಮುಸ್ಲಿಂ ಯುವಕರ ಗುಂಪು ಉದಯಗಿರಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದು, ಈ ಘಟನೆಗೆ ನಿಷೇಧಿತ ಸಂಘಟನೆಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಗಲಭೆ ಹಿಂದೆ ಸಂಘಟನೆಗಳ ಕೈವಾಡ?
ಪೊಲೀಸರು ಗಲಭೆ ಹಿಂದೆ ನಿಷೇಧಿತ ಸಂಘಟನೆಗಳ ಪ್ರಚೋದನೆಯ ಶಂಕೆಯಲ್ಲಿ ತನಿಖೆ ಮುಂದುವರಿಸಿದ್ದಾರೆ. ಈ ಹಿಂದೆ ಗಲಭೆಗಳಾದ ಮಾದರಿಯಲ್ಲಿಯೇ ಈ ಪ್ರಕರಣ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಸಿಸಿಬಿ, ಟೆಕ್ನಿಕಲ್ ಟೀಂ, ಸೆನ್ ವಿಭಾಗಗಳ ಮೂಲಕ ತನಿಖೆ ನಡೆಸುತ್ತಿದ್ದಾರೆ. ಟವರ್ ಲೊಕೇಶನ್, ಸಿಸಿಟಿವಿ ದೃಶ್ಯ, ಮೊಬೈಲ್ ದಾಖಲೆಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

ಗಲಭೆಗೆ ಕಾರಣವಾದ ಸಾಮಾಜಿಕ ಮಾಧ್ಯಮ ಪೋಸ್ಟ್
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆ, ಯುವಕನೊಬ್ಬ ಅನ್ಯಧರ್ಮೀಯರ ಧರ್ಮಗುರುಗಳ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ್ದನು. ಇದರಿಂದ ಕೋಪಗೊಂಡ ಮುಸ್ಲಿಂ ಯುವಕರ ಗುಂಪು ಉದಯಗಿರಿ ಪೊಲೀಸ್ ಠಾಣೆ ಮುಂದೆ ಸೇರಿ ಪ್ರತಿಭಟನೆ ನಡೆಸಿ, ಪೋಸ್ಟ್ ಮಾಡಿದ ಯುವಕನನ್ನು ಬಂಧಿಸುವಂತೆ ಒತ್ತಾಯಿಸಿತು. ಮಾತಿನ ಚಕಮಕಿ ಗಲಭೆಗೆ ತಿರುಗಿ, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ, ಪೊಲೀಸರ ವಾಹನಗಳಿಗೆ ಹಾನಿ ಮಾಡಿದರು. ಈ ದಾಳಿಯಲ್ಲಿ ಕೆಲ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಹಿಂಸಾಚಾರ ತಡೆಯಲು ಪೊಲೀಸರು ಗುಂಡು ಹಾರಿಕೆ
ಗಲಭೆ ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದರಿಂದ ಉದ್ರಿಕ್ತರು ಚದುರಿದರು. ರಾತ್ರಿಯಿಡೀ ಗಲಭೆ ಮುಂದುವರಿದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು. ಸದ್ಯ ಪೋಸ್ಟ್ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ -ರಾಜ್ಯದಲ್ಲಿ ತಾಪಮಾನ ಏರಿಕೆ: ಬಿಸಿಲಿನ ತೀವ್ರತೆ ಹೆಚ್ಚಳ, ಹವಾಮಾನ ಇಲಾಖೆಯ ಮುನ್ಸೂಚನೆ
F

ರಾಜಕೀಯ ಪ್ರತಿಕ್ರಿಯೆಗಳು
ಘಟನೆ ಕುರಿತು ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, “ಉದಯಗಿರಿಯ ಪುಂಡ ಮುಸ್ಲಿಂಗಳಿಗೆ ಸರ್ಕಾರ ಸಂಪೂರ್ಣ ರಕ್ಷಣೆ ನೀಡುತ್ತಿದೆ. ಅರವಿಂದ್ ಕೇಜ್ರಿವಾಲ್ ಸೋತರೆ ಮೈಸೂರಿನ ಮುಸ್ಲಿಂರಿಗೆ ಯಾಕೆ ಕೋಪ? ಪೊಲೀಸರು ಕೂಂಬಿಂಗ್ ಆಪರೇಷನ್ ನಡೆಸಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.

error: Content is protected !!