ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಕಳೆದ ರಾತ್ರಿಯೂ ಮಡಿಕೇರಿ ನಗರದಲ್ಲಿ ಜೋರು ಮಳೆಯಾಗಿತ್ತು. ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ, ಕಾಫಿ ಬೆಳೆಗೆ ಅನುಕೂಲವಾಗಿದೆ. ಹೀಗಾಗಿ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಡಿಕೇರಿಯಲ್ಲಿ ಇಂದೂ ಸಹ ಒಂದು ತಾಸು ಆರ್ಭಟಿಸಿದ ಮಳೆಗೆ ಪ್ರವಾಸಿತಾಣ ತಾಣ ರಾಜಾಸೀಟ್ ನ ಒಳಭಾಗದಲ್ಲಿನ ಬೃಹತ್ ಮರ ಧರೆಗೆ ಉರುಳಿದೆ. ಮಳೆ ಸುರಿಯುತ್ತಿದ್ದರಿಂದ ಪ್ರವಾಸಿಗರ ಓಡಾಟ ಇರದೇ ಇರುವುದರಿಂದ ಅನಾಹುತ ತಪ್ಪಿದಂತಾಗಿದೆ.
ವಿರಾಜಪೇಟೆ ಮಾರ್ಗವಾದ ಮೇಕೇರಿ ರಸ್ತೆಯಲ್ಲಿಯೂ ಭಾರೀ ಗಾತ್ರದ ಮರ ಬಿದ್ದು, ವಾಹನ ಸವಾರರು ಪರದಾಟ ನಡೆಸಿದರು. ಸುಂಟಿಕೊಪ್ಪ, ಗೋಣಿಕೊಪ್ಪಲು, ಕೆದಕಲ್, ಗಾಳಿಬೀಡು, ಕಾಲೂರು, ವಿರಾಜಪೇಟೆ, ನಾಪೋಕ್ಲು, ತಲಕಾವೇರಿ ಭಾಗದಲ್ಲೂ ಧಾರಕರವಾಗಿ ಮಳೆಯಾಗಿದೆ.