ದರ್ಶನ್ ವಿರುದ್ಧ ರೈತ ಸಂಘದ ಪ್ರತಿಭಟನೆ : ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಒತ್ತಾಯ

Team Newsnap
1 Min Read

ಮಂಡ್ಯ : ರೇಣುಕಾ ಸ್ವಾಮಿಯನ್ನು ಅಪಹರಿಸಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರನಟ ದರ್ಶನ್, ಪವಿತ್ರ ಗೌಡ ಹಾಗೂ ಸಹಚರರಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ( ರೈತ ಬಣ ) ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ಪ್ರತಿಭಟಿಸಿದರು.

ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮನವಿ ಪತ್ರ ರವಾನಿಸಿದರು.

ಚಲನಚಿತ್ರ ಮಾಧ್ಯಮ ಸಮಾಜದಲ್ಲಿ ಬದಲಾವಣೆ ತರಬಹುದಾದ ಪ್ರಬಲ ದೃಶ್ಯ ಮಾಧ್ಯಮವಾಗಿದೆ, ಬಂಗಾರದ ಮನುಷ್ಯ ಚಿತ್ರದಿಂದ ಸ್ಫೂರ್ತಿ ಪಡೆದು ಜೀವನದಲ್ಲಿ ಬದಲಾವಣೆ ಗೊಂಡವರನ್ನು ನೋಡಿದ್ದೇವೆ,ಆದರೆ ಚಲನಚಿತ್ರದಲ್ಲಿ ಆದರ್ಶ ನಾಯಕನಂತೆ ನಟಿಸಿ ನಿಜ ಜೀವನದಲ್ಲಿ ಖಳನಾಯಕನಂತೆ ವರ್ತಿಸಿ ಅಮಾಯಕ ಯುವಕ ರೇಣುಕಾ ಸ್ವಾಮಿಯನ್ನು ಹತ್ಯೆಮಾಡಿರುವ ಚಿತ್ರನಟ ದರ್ಶನ್ ಕನ್ನಡ ಚಲನಚಿತ್ರ ರಂಗಕ್ಕೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದರು.

ರೇಣುಕಾ ಸ್ವಾಮಿ ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶ ಇತ್ತು, ಆದರೆ ಇದನ್ನು ಬಿಟ್ಟು ಕಾನೂನು ಕೈಗೆತ್ತಿಕೊಂಡು ಹತ್ಯೆ ಮಾಡಿರುವುದು ಅಕ್ಷಮ್ಯ ಅಪರಾಧ ವಾಗಿದ್ದು, ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವುದರಿಂದ ಪ್ರಕರಣ ಮುಚ್ಚಿ ಹಾಕುವ ಸಂಶಯ ಇರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಈಗಾಗಲೇ ತನಿಖೆ ಕೈಗೊಂಡಿರುವ ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ನ್ಯಾಯ ಸಮ್ಮತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಚಿತ್ರನಟ ದರ್ಶನ್ ಅಪರಾಧ ಹಿನ್ನೆಲೆಯುಳ್ಳವ ರಾಗಿದ್ದು ಇವರ ಮೇಲೆ ಹಲವು ಪ್ರಕರಣ ಇರುವುದರಿಂದ ಈತನನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಬೇಕು,ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರರಂಗದಿಂದ ಬ್ಯಾನ್ ಮಾಡಬೇಕು,ಈತ ಅಭಿನಯಿಸಿರುವ ಚಲನಚಿತ್ರಗಳನ್ನು ಬಹಿಷ್ಕರಿಸಬೇಕು, ಚುನಾವಣೆಗಳಲ್ಲಿ ಈತನನ್ನು ಪ್ರಚಾರಕ್ಕೆ ಕರೆಯಬಾರದು, ಹಾಗೊಮ್ಮೆ ಪ್ರಚಾರ ಮಾಡಿದರೆ ಅಂತಹ ಅಭ್ಯರ್ಥಿಗೆ ಮತ ನೀಡಬಾರದು ಎಂದು ಒತ್ತಾಯಿಸಿದರು.

ರೈತ ಸಂಘದ ಇಂಗಲಗುಪ್ಪೆ ಕೃಷ್ಣೇಗೌಡ ನೇತೃತ್ವ ವಹಿಸಿದ್ದರು.

Share This Article
Leave a comment