ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕ 45 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಭಿವಾಂಡಿಯ ಸುಖದೇವ್ ಕಿರ್ದತ್ ಮೃತ ವ್ಯಕ್ತಿ. ಇವರು ಕಣ್ಣಿನ ತಜ್ಞರ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸುಖದೇವ್ ಕಿರ್ದತ್ ಇತ್ತೀಚೆಗಷ್ಟೇ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆದ 15 ನಿಮಿಷಗಳ ಬಳಿಕ ವೀಕ್ಷಣಾ ಕೊಠಡಿಗೆ ತೆರಳಿ ಮೃತಪಟ್ಟಿದ್ದಾರೆ.
ಜನವರಿ 28ರಂದು ಸುಖದೇವ್ ಕಿರ್ದತ್ ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ಪಡೆದುಕೊಂಡಿದ್ದರು. ಲಸಿಕೆ ನೀಡುವುದಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಸುಖದೇವ್ ಕಿರ್ದತ್ ಅನೇಕ ವರ್ಷಗಳಿಂದ ರಕ್ತದೊತ್ತಡ ಹೊಂದಿದ್ದಾರೆ ಎಂಬ ವಿಚಾರ ತಿಳಿದುಬಂದಿತ್ತು. ಆದರೂ ಲಸಿಕೆ ನೀಡಿದ ಬಳಿಕ ಯಾವುದೇ ಅಡ್ಡಪರಿಣಾಮಗಳಾಗಿರಲಿಲ್ಲ.
ಆದರೆ ಈ ಬಾರಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸುಖದೇವ್ ಕಿರ್ದತ್ ರಕ್ತದೊತ್ತಡ ಹಾಗೂ ಉಸಿರಾಟ ಕ್ರಿಯೆ ಎಲ್ಲವೂ ಸಹಜ ಸ್ಥಿತಿಯಲ್ಲಿದ್ದರಿಂದ ಲಸಿಕೆ ನೀಡಲಾಗಿತ್ತು.
ವ್ಯಕ್ತಿ ಸಾವಿಗೆ ಕಾರಣವೆನೆಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದಿರುವುದರಿಂದ ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕಾರಣ ಸ್ಪಷ್ಟಗೊಳ್ಳಲಿದೆ.