ಕರ್ನಾಟಕ ಸರ್ಕಾರವು ಕೈಗಾರಿಕಾ ನಿರ್ಮಾಣಕ್ಕೆ ಕೆಐಎಡಿಬಿ ಮುಖಾಂತರ ರೈತರ ಸಾಗುವಳಿ ಭೂ ಸ್ವಾಧೀನಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ನಾಗಮಂಗಲದ ರೈತ ಸಂಘಟನೆಗಳು, ಬಿಳಗುಂದ, ಹಟ್ನ, ಬೀಚನಹಳ್ಳಿ ಮತ್ತು ಚೆನ್ನಾಪುರ ಗ್ರಾಮಸ್ಥರು ಬೆಂಗಳೂರು-ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಸೋಮವಾರ ನಡೆದ ಪ್ರತಿಭಟನೆಯ ನೇತೃತ್ವವನ್ನು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿಕೊಂಡಿದ್ದರು.
ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಡಿವೈಎಸ್ಪಿ ಕೆ.ಬಿ. ವಿಶ್ವನಾಥ್ ಹಾಗೂ ಸರ್ಕಲ್ ಪೋಲೀಸ್ ಇನ್ಸ್ಪೆಕ್ಟರ್ ರಾಜೇಂದ್ರ ಭದ್ರತೆ ಕಲ್ಪಿಸಿದ್ದರು. ಆದರೂ ಪ್ರತಿಭಟನಾಕಾರರು ಹಾಗೂ ಪೋಲೀಸರ ನಡುವೆ ಕೆಲ ಕ್ಷಣಗಳ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಗೊಂದಲವಾಗಿತ್ತು.
ನಾಗಮಂಗಲ ತಾಲೂಕಿನ ಗಡಿಯಾದ ಗೊಂದಿಹಳ್ಳಿಯಿಂದ ಬೈಕ್ ರ್ಯಾಲಿ, ಪಾದಯಾತ್ರೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ ಕೂಡುವ ಹಟ್ನ ಗ್ರಾಮದಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.