ಕೊರೊನಾ ಪಾದಯಾತ್ರೆಯಲ್ಲಿ ಒಬ್ಬ ಪೊಲೀಸ್ ಆದರೂ ಕರ್ತವ್ಯ ನಿರ್ವಹಿಸಿದ್ದರಾ, ಎಲ್ಲಾ ಕಾರ್ಯವನ್ನು ನಮ್ಮ ಕಾರ್ಯಕರ್ತರೇ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು
ಮೇಕೆದಾಟು ಪಾದಯಾತ್ರೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಕೊರೊನಾ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿಅವರು, ಪೊಲೀಸರು ಒಂದೇ ಒಂದು ಬಸ್ಸು ನಿಯಂತ್ರಿಸುವ ಕೆಲಸವನ್ನಾದರೂ ಮಾಡಿದ್ದಾರಾ? ನಮ್ಮ ಕಾರ್ಯಕರ್ತರೇ ಜನರನ್ನು ನಿಯಂತ್ರಿಸಿದರು. ಊಟದ ಬಳಿಯೂ ನಮ್ಮವರೇ ಎಲ್ಲಾ ನಿಯಂತ್ರಿಸಿದ್ದಾರೆ ಎಂದು ವಾಗ್ದಾಳಿ ಮಾಡಿದರು
ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಕಾರ್ಯಕ್ರಮಕ್ಕೆ ಯಾಕೆ ಕೇಸು ಹಾಕಿಲ್ಲ? ಮೊದಲು ಅಲ್ಲಿ ಕೇಸು ಹಾಕಲಿ ಎಂದ ಅವರು ನಿನ್ನ ವೃತ್ತಿಗೆ, ಬಟ್ಟೆಗೆ ಗೌರವ ಇದ್ದರೆ ಬಿಜೆಪಿ ಮೇಲೂ ಕೇಸು ಹಾಕಿ ಎಂದು ಡಿಜಿಗೆ ಹೇಳುತ್ತೇನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಕೊರೊನಾ ಕಡಿಮೆ ಆದ ನಂತರ ಮತ್ತೆ ಪಾದಯಾತ್ರೆ ನಡೆಸುವ ಬಗ್ಗೆ ಸಂಕಲ್ಪದ ಜೊತೆಗೆ ಪ್ರತಿಜ್ಞೆಯೂ ಆಗಿದೆ. ಕೊರೊನಾ ನಿಯಮ ಸಡಿಲವಾಗುತ್ತಿದ್ದಂತೆ ಪಾದಯಾತ್ರೆ ಮುಂದುವರಿಸುತ್ತೇವೆ. 10 ಜನನೋ, 100 ಜನನೋ ಸರ್ಕಾರ ಎಷ್ಟು ಹೇಳುತ್ತಾರೋ ಅಷ್ಟು ನಡೆಯುತ್ತೇವೆ ಎಂದರು.
ಬಿಜೆಪಿ ಅವರು ಏನೇನು ಟಾರ್ಗೆಟ್ ಮಾಡುತ್ತಾರೋ ಮಾಡಲಿ. ಪಾದಯಾತ್ರೆ ವಿಚಾರದಲ್ಲಿ ಎಲ್ಲಾ ಸೇರಿ ಒಂದು ಕೇಸು ಹಾಕಬಹುದಿತ್ತು. ಆದರೆ ದಿನ ಒಂದೊಂದು ಕೇಸು ಹಾಕಿದ್ದಾರೆ ಎಂದು ಕಿಡಿಕಾರಿದರು.