ಸಂಸದರು ಟ್ರಾಕ್ ತಪ್ಪುತ್ತಿದ್ದಾರೆ. ಕೆ ಆರ್ ಎಸ್ ವಿಚಾರ ಬಿಟ್ಟು ಈಗ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಟ್ರಾಕ್ ಬದಲಿಸಿದ್ದಾರೆ. ಕೆಆರ್ ಎಸ್ ಬಿರುಕು ಬಿಟ್ಟಿಲ್ಲ ಎಂದು ಕಾವೇರಿ ಪ್ರಾಧಿಕಾರವೇ ಅಧೀಕೃತವಾಗಿ ಹೇಳಿಕೆ ನೀಡಿದೆ. ಹೀಗಾಗಿ ಈ ವಿಷಯದಲ್ಲಿ ಸಾರ್ವಜನಿಕರ ಕ್ಷಮೆ ಕೇಳಿ, ಇಲ್ಲಿಗೆ ವಿವಾದ ಅಂತ್ಯಗೊಳಿಸುವಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸಂಸದೆ ಸುಮಲತಾಗೆ ಸಲಹೆ ಮಾಡಿದರು.
ಅರಕೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ರವೀಂದ್ರ, ಏನೋ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ಹೋರಾಟ ಮಾಡ್ತಿದ್ದಾರೆ. ಎಲ್ಲವೂ ಗಾಬರಿಯಾದಂತೆ ಕಾಣುತ್ತಿದೆ, ಎಮೋಷನಲ್ ಆಗಿ ಮಾತನಾಡಿ ಅವರು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗಮನಹರಿಸುವುದು ಉತ್ತಮ ಎಂದರು.
ಈ ಹಿಂದೆ ಕೇಂದ್ರ ತಾಂತ್ರಿಕ ಸಮಿತಿ ಕೆಆರ್ ಎಸ್ ಡ್ಯಾಂ ಪರಿಶೀಲನೆ ಮಾಡಿ, ಆಣೆಕಟ್ಟೆ ಸುರಕ್ಷಿತ ಎಂದಿದ್ದಾರೆ. ಈಗಲಾದರು ಜನರ ಕ್ಷಮೆ ಕೇಳಿ ಈ ಎಪಿಸೋಡ್ ಮುಗಿಸಿ ಎಂದರು.
ಅಳುವುದರಿಂದ ಈಗ ಯಾವುದೇ ಪ್ರಯೋಜನವಿಲ್ಲ :
ಅಳೋದು, ಕರೆಯೋದಕ್ಕೆ ಮಂಡ್ಯ ಜನ ಒಂದ್ಸಲ ಬೆಲೆ ಕೊಟ್ಟಿದ್ದಾರೆ. ನೀವು ಮತ್ತೆ ಮತ್ತೆ ಅದನ್ನೇ ಮಾಡಿದರೆ. ಜನ ವ್ಯಂಗ್ಯ ಮಾಡ್ತಾರೆ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ ಎಂದು ಸಂಸದೆ ಸುಮಲತಾಗೆ ಸೂಚ್ಯವಾಗಿ ಹೇಳಿದರು.
ನೀವು ನನ್ನನ್ನು ಸಹೋದರ ಎಂದು ಕರೆದಿದ್ದರಿಂದ, ಸಹೋದರಿ ಬಗ್ಗೆ ಜನ ವ್ಯಂಗ್ಯ ಮಾತನಾಡುವುದನ್ನು ಕೇಳೋದು ನನಗೆ ಕಷ್ಟವಾಗುತ್ತದೆ. ನಿಮ್ಮ ತಪ್ಪುಗಳನ್ನು ಈಗಲಾದರೂ ತಿದ್ದಿಕೊಳ್ಳಿ ಎಂದು ಹೇಳಿದರು.
ನಾನು ಶಾಸಕ. ನನಗೆ ಭಸ್ಮ ಆಗ್ಲಿ ಮಣ್ಣಾಗೋಗಲಿ ಎಂದು ನನಗೆ ಸುಮಲತಾ ಶಾಪ ಹಾಕಿದ್ದಾರೆ. ಈ ಮಾತುಗಳು ಯಾರ ಗಮನಕ್ಕೂ ಬಂದಿಲ್ವ, ಇಂತಹ ಮಾತುಗಳು ಸರಿನಾ ಎಂದು ಪ್ರಶ್ನೆ ಮಾಡಿದ ರವೀಂದ್ರ, ಕೊಳ್ಳೇಗಾಲ ಮಾಟಗಾರರ ರೀತಿ ಭಸ್ಮ ಆಗೋಗಲಿ ಎಂದು ಹೇಳ್ತೀರಾ ಎಂದಿದ್ದಾರೆ.
ನಾನು ಎಲ್ಲಿ ಓದಿದ್ದು ಎಂದು ಕೇಳಿದ್ದಾರೆ. ನಾನು ನನ್ನ ತಾತ ಚುಂಚೇಗೌಡರು, 1957 ರಲ್ಲಿ ಶಾಸಕರಾಗಿದ್ದ ವೇಳೆಯಲ್ಲಿ ಕಟ್ಟಿಸಿರುವ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದೇನೆ. ಎಂದು ತಿರುಗೇಟು ನೀಡಿದರು.