ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಇಲ್ಲ : ಅಂಗೀಕಾರ ಆಗದ ಅಣ್ಣಾಮಲೈ ನಾಮಪತ್ರ

Team Newsnap
1 Min Read

ತಮಿಳುನಾಡಿನ ಅರವಕುರುಚಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ನಾಮಪತ್ರ ಇನ್ನೂ ಅಂಗೀಕಾರ ಆಗಿಲ್ಲ.

ಈ ಕಾರಣದಿಂದಾಗಿ ಅಣ್ಣಾಮಲೈ ಅವರಿಗೆ ಆರಂಭದಲ್ಲಿಯೇ ಆಘಾತ ಎದುರಾಗಿದೆ.

ಡಿಎಂಕೆ ಭದ್ರಕೋಟೆ ಎನಿಸಿರುವ ಅರವಕುರಚಿ ಕ್ಷೇತ್ರದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಅಭ್ಯರ್ಥಿಯಾಗಿ ಮಾರ್ಚ್ 18ರಂದು ನಾಮಪತ್ರ ಸಲ್ಲಿಸಿದ್ದರು.

ಆದರೆ ಅವರ ನಾಮಪತ್ರ ಇನ್ನೂ ಅಂಗೀಕಾರವಾಗಿಲ್ಲ. ನಾಮಪತ್ರಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ.

ಅಣ್ಣಾಮಲೈ ಸಲ್ಲಿಸಿದ್ದ ನಾಮಪತ್ರದಲ್ಲಿನ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ಇದೆ ಎಂಬುದನ್ನು ಉಲ್ಲೇಖಿಸಿಲ್ಲ. ಅಣ್ಣಾಮಲೈ ವಿರುದ್ಧ ಹತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ ಎಂದು ಪಕ್ಷೇತರ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸ್ಪಷ್ಟೀಕರಣ ಕೇಳಿದೆ.

ಅಣ್ಣಾಮಲೈ ಅವರು ಹತ್ತಕ್ಕೂ ಅಧಿಕ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆದರೆ ಅವರು ನಾಮಪತ್ರದಲ್ಲಿ ಅದರ ಬಗ್ಗೆ ಮಾಹಿತಿ ನೀಡದೆ ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರು ವಿವರಣೆ ನೀಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಜತೆಗೆ ಅವರ ನಾಮಪತ್ರವನ್ನು ತಡೆ ಹಿಡಿದಿದೆ.

Share This Article
Leave a comment