Categories: Main News

ಹಳ್ಳಿ ಟು ಅಪಾರ್ಟ್‌ಮೆಂಟ್ ವರೆಗೆ ಸಾಗುತ್ತಿರುವ ಆಧುನಿಕ ನಾಗರಿಕ ಸಮಾಜ

ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು, ಬಿದಿರಿನ ಬೊಂಬುಗಳ ಮೇಲ್ಚಾವಣಿಯ ಮಣ್ಣಿನ ಪುಟ್ಟ ಮನೆಗಳು, ಇಟ್ಟಿಗೆಯ ಹೆಂಚಿನ ಮನೆಗಳು, ಸಿಮೆಂಟ್ ಸೀಟಿನ ಶೆಡ್ ಆಕಾರದ ಮನೆಗಳು ಹೆಚ್ಚಾಗಿ ಭಾರತದ ಪ್ರತಿ ಹಳ್ಳಿ ಗ್ರಾಮ ಪಟ್ಟಣಗಳಲ್ಲಿ ಕಾಣುತ್ತಿದ್ದವು. ಸ್ಥಳೀಯ ಹವಾಮಾನ ಮತ್ತು ಅವರವರ ಆರ್ಥಿಕ ಪರಿಸ್ಥಿತಿ ಅವಲಂಬಿಸಿ ಇದನ್ನು ನಿರ್ಮಿಸಲಾಗುತ್ತಿತ್ತು. ಎಲ್ಲೋ ಅಪರೂಪಕ್ಕೆ ಎಂಬಂತೆ ಶ್ರೀಮಂತರ ವಿಶಾಲ ಮನೆಗಳು, ಕಲ್ಲಿನ ದೊಡ್ಡ ಕಟ್ಟಡಗಳು ಕಾಣುತ್ತಿದ್ದವು. ಬ್ಯಾಂಕು, ಆಸ್ಪತ್ರೆ, ಅಂಚೆ ಕಚೇರಿ, ನಾಡ ಕಚೇರಿಗಳು, ಆರಕ್ಷಕ ಠಾಣೆಗಳು ಸಹ ಬಹುತೇಕ ಇದೇ ಮಾದರಿಯ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು.

ಎಲ್ಲಾ ಹಳ್ಳಿಯಲ್ಲಿಯೂ ಸಾಮಾನ್ಯವಾಗಿ ನಾಯಿ, ಕುರಿ, ಕೋಳಿ, ಹಂದಿ, ಹಸು, ಎಮ್ಮೆ, ಹಾವು, ಚೇಳುಗಳು, ಕೆರೆ ಕುಂಟೆಗಳು, ಹಳೆಯ ಬಾವಿಗಳು, ದೇವಸ್ಥಾಗಳು, ಒಂದಿಬ್ಬರು ಹುಚ್ಚರು, ಚಿಕ್ಕ ಮಕ್ಕಳ ಗೋಲಿ ಬುಗುರಿ ಆಟದ ಕಲರವ, ಅಜ್ಜ ಅಜ್ಜಿಯರ ಕೆಮ್ಮು, ಗಾಂಧಿ ಟೋಪಿಯವರು, ಎತ್ತಿನ ಗಾಡಿಗಳು, ಚಿಕ್ಕ ಪುಟ್ಟ ದಿನಸಿ ಅಂಗಡಿಗಳು, ಟೀ ಕಾಫಿ ಹೋಟೆಲ್‌ಗಳು ಮುಂತಾದ ಅನೇಕ ವೈವಿಧ್ಯಮಯ ಪಾತ್ರಗಳು ಕಾಣುತ್ತಿದ್ದವು.

ಜನಸಂಖ್ಯೆಯು ಕಡಿಮೆ ಇದ್ದ ಕಾರಣ ಅಪಘಾತ, ಅನಾರೋಗ್ಯ, ಆತ್ಮಹತ್ಯೆ, ಅಪರಾಧಗಳು ಸಹ ಅಪರೂಪವೇ ಆಗಿತ್ತು. ಹಬ್ಬ, ಊರ ಜಾತ್ರೆ, ಮದುವೆಗಳು ಮಾತ್ರ ಆ ಸಮಯದ ದೊಡ್ಡ ಸಂಭ್ರಮಗಳಾಗಿದ್ದವು.

ಸುಮಾರು 1990 ರ ನಂತರ ಜಾಗತೀಕರಣ ಮತ್ತು ಮುಕ್ತ ಆರ್ಥಿಕ ವ್ಯವಸ್ಥೆಯ ಕಾರಣದಿಂದ ಶಾಲೆಗಳು, ರಸ್ತೆಗಳು, ವಾಹನಗಳು, ವಿದ್ಯುತ್, ಬ್ಯಾಂಕುಗಳು, ಪೋಲೀಸ್ ಸ್ಟೇಷನ್ನುಗಳು, ಟಿವಿಗಳು, ಸಮೂಹ ಸಂಪರ್ಕ ಮಾಧ್ಯಮಗಳು, ಮಂಡಲ ಪಂಚಾಯಿತಿ ಕಚೇರಿಗಳು, ಎಲ್ಲಾ ಹಳ್ಳಿಗಳಿಗೂ ಪ್ರವೇಶಿಸಿದವು.

ಅಲ್ಲಿಂದ ಕೇವಲ ಈ 29/30 ವರ್ಷಗಳಲ್ಲಿ ಭಾರತೀಯ ಜನಜೀವನದ ಗತಿಯೇ ಬದಲಾಯಿತು. ನೋಡನೋಡುತ್ತಿದ್ದಂತೆ ನಗರೀಕರಣದ ಪ್ರಭಾವಕ್ಕೆ ಎಲ್ಲವೂ ಒಳಗಾದವು. ಜೀನ್ಸ್ ಪ್ಯಾಂಟುಗಳು, ನೈಟಿಗಳು, ಇಡ್ಲಿ ವಡೆ ದೋಸೆ ಬ್ರೆಡ್ ಆಮ್ಲೆಟ್ಟುಗಳು, ಬೇಕರಿಗಳು, ಪೆಪ್ಸಿ ಕೋಲಾಗಳು, ವಿವಿಧ ರೀತಿಯ ಬಿಸ್ಕತ್ತು ಚಾಕಲೇಟುಗಳು, ನಾಮಕರಣ, ಗೃಹ ಪ್ರವೇಶ, ಎಂಗೇಜ್ ಮೆಂಟ್, ರಿಸಿಪ್ಷನ್, ಬರ್ತ್ ಡೇಗಳು, ಪಿಕ್ ನಿಕ್ ಗಳು, ಹೊಸ ವಿನ್ಯಾಸದ ಬಣ್ಣ ಬಣ್ಣದ ಕಟ್ಟಡಗಳು, ಬಾತ್ ರೂಂ, ಬೆಡ್ ರೂಂ, ಹಾಲ್, ಕಿಚನ್ ಗಳು, ಸ್ವಿಮಿಂಗ್ ಪೂಲ್ ಗಳು ಹೀಗೆ ನಾನಾ ರೀತಿಯ ಜೀವನ ಶೈಲಿಗಳು ಜನಪ್ರಿಯವಾದವು.

ಹಾಗೆಯೇ ನಗರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಇದ್ದ ಅಪಾರ್ಟ್ ಮೆಂಟ್ ಸಂಸ್ಕೃತಿ ಬೃಹದಾಕಾರವಾಗಿ ಬೆಳೆದು ಒಂದೊಂದು ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್ ಗಳು ಒಂದು ಸಣ್ಣ ಪಟ್ಟಣಗಳಂತಾದವು. ಬೆಂಕಿ ಪೊಟ್ಟಣ ಜೋಡಿಸಿದಂತೆ ಎಲ್ಲಾ ಕಡೆಯೂ ದೂರಕ್ಕೆ ಕಣ್ಣು ಹಾಯಿಸಿದಷ್ಟೂ ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್………..

ಹೆಚ್ಚಾಗಿ ಹೊರ ರಾಜ್ಯದ ಜನರಿಗೆ ಇದು ಅತ್ಯಂತ ಉಪಯುಕ್ತವಾಯಿತು. ನೂರಾರು ಮನೆಗಳಿರುವ ವಸತಿ ಸಮುಚ್ಚಯಗಳಲ್ಲಿ ಸಾವಿರಾರು ಜನ ವಾಸ ಮಾಡತೊಡಗಿದರು. ಕೆಲವೇ ಎಕರೆಗಳಷ್ಟು ಜಾಗದಲ್ಲಿ ಅಂಗಡಿ, ಹೋಟೆಲ್, ಜಿಮ್, ಈಜುಕೊಳ, ಆಟದ ಅಂಕಣ, ಸಭಾಂಗಣ, ಲೈಬ್ರರಿ, ಆಸ್ಪತ್ರೆ, ಶಾಲೆ ಮುಂತಾದ ಸೌಕರ್ಯಗಳನ್ನು ಒದಗಿಸಿರುತ್ತಾರೆ. ಜೊತೆಗೆ ಧಾರ್ಮಿಕ ಹಬ್ಬಗಳು, ರಾಷ್ಟ್ರೀಯ ಹಬ್ಬಗಳನ್ನು ಅಲ್ಲಿನ ಸಂಘದವರ ನೇತೃತ್ವದಲ್ಲಿ ಒಟ್ಟಾಗಿ ಆಚರಿಸುವ ಸಂಪ್ರದಾಯವೂ ಪ್ರಾರಂಭವಾಗಿದೆ. ಆಗಾಗ ಸಾಂಸ್ಕೃತಿಕ ಮತ್ತು ಮನೋರಂಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಇಡೀ ಅಪಾರ್ಟ್‌ಮೆಂಟ್ ನಿರ್ವಹಿಸಲು ಒಂದು ಸಂಘ ಮಾಡಿಕೊಂಡು ಕ್ರಮಬದ್ದವಾದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಒಂದು ಪ್ರತ್ಯೇಕ ಊರು ಎಂದು ಕರೆಯಬಹುದಾದ ಕೆಲವು ಗುಣಲಕ್ಷಣಗಳು ಈ ಅಪಾರ್ಟ್‌ಮೆಂಟ್ ಗಳಲ್ಲಿ ಇರುತ್ತದೆ. ಆ ರೀತಿಯ ಲಕ್ಷಾಂತರ ಅಪಾರ್ಟ್‌ಮೆಂಟುಗಳು ಈಗ ಎಲ್ಲಾ ಕಡೆ ಕಾಣಸಿಗುತ್ತವೆ.

ಆ ಹೌದು, ಹಳ್ಳಿಗಳ ಜೀವಂತಿಕೆ, ಆ ಒಡನಾಟ, ಆ ಸಮೃದ್ಧ ಪ್ರಾಕೃತಿಕ ಪರಿಸರ, ಆ ಸ್ವಾಭಾವಿಕತೆ, ಸ್ಪಂದನೆ ಈ ಅಪಾರ್ಟ್‌ಮೆಂಟ್ ಗಳಲ್ಲಿ ಇರುವುದಿಲ್ಲ. ಕೃತಕತೆ,ಹಣದ ದುರಹಂಕಾರ, ಸಂಬಂಧಗಳ ನಡುವೆ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತದೆ. ಆದರೆ ಆಧುನಿಕ ಸೌಕರ್ಯಗಳು, ಆಡಂಬರ ಪ್ರದರ್ಶನದ ವೇದಿಕೆಗಳು, ವ್ಯವಹಾರಿಕ ಸಂಬಂಧಗಳು ಮುಂತಾದುವು ಅವರವರ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಸಿಗುತ್ತದೆ.

ಹಳ್ಳಿ ಮತ್ತು ಅಪಾರ್ಟ್‌ಮೆಂಟ್ ಗಳಲ್ಲಿ ಯಾವುದು ಹೆಚ್ಚು ನೆಮ್ಮದಿಯ ತಾಣ ಎಂದು ಹೇಳುವುದು ಅವರವರ ಮನೋಭಾವಕ್ಕೆ ಬಿಟ್ಟ ವಿಷಯ. ಆದರೆ ಬದಲಾದ ಭಾರತೀಯ ಸಮಾಜದ ಜೀವನ ವಿಧಾನವನ್ನು ಇದರಲ್ಲಿ ಗುರುತಿಸಬಹುದು.

ಕಾಲನ ಪ್ರವಾಹದಲ್ಲಿ,
ನಿರಂತರ ಪಯಣದಲ್ಲಿ,
ಬದಲಾವಣೆ ಪರ್ವದಲ್ಲಿ,
ನಾವೂ ಒಂದು ಪಾತ್ರವಾಗುತ್ತಾ ಸಾಗುವುದೇ ಬದುಕು.

  • ವಿವೇಕಾನಂದ. ಹೆಚ್.ಕೆ.
Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024