ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಿಡಿದು ಯುವತಿಯೊಬ್ಬಳು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ಸರ್ಕಾರದ ನೀತಿಯನ್ನು ವಿರೋಧಿಸಿ ಖಾಸಗಿ ಬಸ್ಗಳು ಮುಷ್ಕರ
ನಡೆಸುತ್ತಿದ್ದ ಕಾರಣ ಸರ್ಕಾರಿ ಬಸ್ಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು.
ಈ ವೇಳೆ ಕರಿವೇಲೂರು ಮೂಲದ ಆರತಿ ಕಣ್ಣೂರಿನಿಂದ ಕನ್ಹಂಗದ್ ಪ್ರದೇಶಕ್ಕೆ ಕೆಎಸ್ಆರ್ಟಿಸಿ ಬಸ್ ಮೂಲಕ ತೆರಳುವಾಗ ಸಹ ಪ್ರಯಾಣಿಕನೊಬ್ಬ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ಆರೋಪಿ ರಾಜೀವ್ (52) ನನ್ನು ಯುವತಿ ಜೊತೆಗೆ ಬಸ್ ನೀಲೇಶ್ವರಂ ತಲುಪುತ್ತಿದ್ದಂತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ.
ಈ ವೇಳೆ ಯುವತಿ ಅನೇಕ ಬಾರಿ ಆತನಿಗೆ ಎಚ್ಚರಿಕೆ ನೀಡಿದ್ದಾಳೆ. ಆದರೂ ತನ್ನ ನೀಚ ಕೆಲಸವನ್ನು ಮುಂದುವರೆಸಿದ್ದಾನೆ. ಅಲ್ಲದೇ ಯುವತಿಗೆ ಕಿರುಕುಳ ನೀಡುತ್ತಿದ್ದರು ಬಸ್ನಲ್ಲಿದ್ದ ಜನರು ಆಕೆಯ ಸಹಾಯಕ್ಕೆ ಬರಲಿಲ್ಲ.
ಕೊನೆಗೆ ಇದರಿಂದ ಬೇಸತ್ತು ಯುವತಿ ಪಿಂಕ್ ಪೊಲೀಸರಿಗೆ ಕರೆ ಮಾಡಿದ್ದಾಳೆ. ಈ ವಿಚಾರ ತಿಳಿದು ಆರೋಪಿ ಕವ್ಹಾಂಗದ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುತ್ತಿದ್ದಂತೆ ಇಳಿದು ಪರಾರಿಯಾಗಲು ಯತ್ನಿಸಿದ್ದಾನೆ. ಆದರೂ ಯುವತಿ ಆತನನ್ನು ಬೆನ್ನಟ್ಟಿಕೊಂಡು ಹೋಗಿದ್ದಾಳೆ. ಜೊತೆಗೆ ಆರೋಪಿ ತಪ್ಪಿಸಿಕೊಳ್ಳಬಾರದೆಂದು ಆತನ ಫೋಟೋವನ್ನು ಮೊಬೈಲ್ನಲ್ಲಿ ಸೆರೆಹಿಡಿದುಕೊಂಡಿದ್ದಾಳೆ.
ನಂತರ ಲಾಟರಿಕೊಳ್ಳುವ ನೆಪದಲ್ಲಿ ಅಂಗಡಿಯೊಳಗೆ ನುಗ್ಗಿದ ಆರೋಪಿಯನ್ನು ಸ್ಥಳೀಯರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿ, ಆರೋಪಿ ವಿರುದ್ಧ ದೂರು ದಾಖಲಿಸಿದ್ದಾಳೆ.