February 22, 2026

Newsnap Kannada

The World at your finger tips!

somshekar1

ಬಿಜೆಪಿಗೆ ಮೇಯರ್ ಪಟ್ಟ:ಸಾ ರಾ ಜತೆ ಉಸ್ತುವಾರಿ ಸಚಿವರ ಚರ್ಚೆ

Spread the love
  • ಬಿಜೆಪಿ ನಗರ ಅಧ್ಯಕ್ಷರು, ಸಂಸದರು, ಮೂಡಾ ಅಧ್ಯಕ್ಷರ ಜೊತೆ ಭೇಟಿ, ಮಾತುಕತೆ
  • ಬಿಜೆಪಿ ಅಭ್ಯರ್ಥಿಗೆ ಮೇಯರ್ ಸ್ಥಾನಕ್ಕೆ ಮೈತ್ರಿ ಮಾಡಿಕೊಳ್ಳಲು ಮನವಿ

ಬಿಜೆಪಿ ಅಭ್ಯರ್ಥಿಗಳನ್ನೇ ಮೈಸೂರು ಮೇಯರ್ ಮಾಡಬೇಕೆಂಬ ಉದ್ದೇಶ ದಿಂದ ಜೆಡಿಎಸ್ ಮುಖಂಡ, ಶಾಸಕ ಸಾ.ರಾ. ಮಹೇಶ್ ಅವರನ್ನು ಭೇಟಿ ಮಾಡಿದ್ದೇವೆ. ಅವರು ಸಹ ಅವರ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.

ಸಾ ರಾ ಮಹೇಶ್ ಕಚೇರಿಗೆ ಭೇಟಿ ನೀಡಿದ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಸಂಸದರಾದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ ಹಾಗೂ ಮೂಡಾ ಅಧ್ಯಕ್ಷರಾದ ರಾಜೀವ್ ಸೇರಿದಂತೆ ಪ್ರಮುಖರು ಮೇಯರ್ ಸ್ಥಾನದ ಮೈತ್ರಿ ಬಗ್ಗೆ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಸೋಮಶೇಖರ್ , ನಾಳೆ (ಮಂಗಳವಾರ) ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೈಸೂರಿಗೆ ಬರಲಿದ್ದಾರೆ, ಅವರ ಜತೆ ಸಾರಾ ಮಹೇಶ್ ಅವರು ಚರ್ಚೆ ನಡೆಸಲಿದ್ದಾರೆ. ಬಳಿಕ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ನಮಗೆ ಒಂದು ಬಾರಿ ಅವಕಾಶ ಕೊಡಿ ಎಂದು ಜೆಡಿಎಸ್ ಬಳಿ ನಾವು ಮನವಿ ಮಾಡಿದ್ದೇವೆ. ಇನ್ನು ಅವರು ತೀರ್ಮಾನ ಕೈಗೊಳ್ಳಬೇಕು. ಜೆಡಿಎಸ್ ಜತೆ ಮೊದಲಿನಿಂದಲೂ ಋಣಾನು ಬಂಧವಿದೆ. ಕಾಂಗ್ರೆಸ್ಸಿನವರೊಂದಿಗೆ ಹೋಗುವುದಿಲ್ಲ. ಹೀಗಾಗಿ ಇಲ್ಲಿ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಸಾ.ರಾ. ಮಹೇಶ್, ಈ ಬಾರಿ ಮೇಯರ್ ಹುದ್ದೆ ಸಂಬಂಧ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಇನ್ನೂ ತೀರ್ಮಾನವಾಗಿಲ್ಲ. ಎಚ್.ಡಿ. ಕುಮಾರಸ್ವಾಮಿಯವರೊಂದಿಗೆ, ಚರ್ಚೆ ನಡೆಸಿದ ಬಳಿಕವಷ್ಟೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೊದಲಿನ ಮಾತಿನಂತೆ ಕಾಂಗ್ರೆಸ್ ಗೆ ಅಧಿಕಾರ ಬಿಟ್ಟು ಕೊಡಬೇಕಿತ್ತಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಾ.ರಾ.ಮಹೇಶ್ ಅವರು, ನಮಗೆ ಜೆಡಿಎಸ್ ಪಕ್ಷವೇ ಅಲ್ಲ. ನಮ್ಮೊಂದಿಗೆ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ಆಗುತ್ತಿವೆ ಎಂದು ತಿಳಿಸಿದರು.

error: Content is protected !!