ಈಗಿನ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಗವಾನ್ ಅವರಿಗೆ ಮಸಿ ಬಳಿದ ವಿಚಾರ ಕುರಿತಂತೆ ವಿಧಾನಸೌಧದಲ್ಲಿ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಂಪನಾ ಅವರು ಕಾನೂನಿಗೆ ವಿರುದ್ಧವಾಗಿ ಮಾತನಾಡಿರಲಿಲ್ಲ. ಆದರೂ ಅವರನ್ನು ಠಾಣೆಗೆ ಕರೆದು ವಿಚಾರಿಸಿ ಅವಮಾನ ಮಾಡಿದ್ದಾರೆ. ಇದೀಗ ಹಿರಿಯ ಸಾಹಿತಿ ಭಗವಾನ್ ಅವರಿಗೆ ನ್ಯಾಯಾಲಯದ ಆವರಣದಲ್ಲಿಯೇ ಮಸಿ ಬಳಿಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರೊ.ಕೆ.ಎಸ. ಭಗವಾನ್ ಅವರು ರಾಮನ ಬಗ್ಗೆ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ಮೀರಾ ರಾಘವೇಂದ್ರ ಎಂಬುವರು ಪ್ರಕರಣ ಹೂಡಿದ್ದರು. ಅದಕ್ಕೆ ಜಾಮೀನು ಕೂಡ ಸಿಕ್ಕಿ ಅವರು ನ್ಯಾಯಾಲಯದ ಹೊರಗಡೆ ಬಂದ ಮೇಲೆ ಮಸಿ ಬಳಿದಿರುವುದು ಖಂಡನೀಯ ಎಂದು ಹೇಳಿಕೆ ನೀಡಿದ್ದಾರೆ.
ಹಿರಿಯ ಸಾಹಿತಿಗೆ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದ ಮೀರಾ ರಾಘವೇಂದ್ರ ಒಬ್ಬ ಹೆಣ್ಣುಮಗಳೇ ಆಗಿದ್ದರೂ ಕೂಡ ಕ್ರಮಜರುಗಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.