ಗೋಮಾಂಸ ಸೇವನೆ ಕುರಿತು ಮಾತನಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಗೋ ಹತ್ಯೆ ವಿಚಾರ ಮುಂದಿಟ್ಟುಕೊಂಡೆ ಚುನಾವಣೆಗೆ ಸ್ಪರ್ಧಿಸಲಿ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಟಾಂಗ್ ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಗೋ ಹತ್ಯೆ ವಿಚಾರ ಮುಂದಿಟ್ಟುಕೊಂಡೆ ಚುನಾವಣೆಗೆ ಸ್ಪರ್ಧಿಸಲಿ. ಜನ ಆಗ ಸರಿ ತಪ್ಪನ್ನು ಹುಡುಕಿ ಫಲಿತಾಂಶ ನೀಡುತ್ತಾರೆ. ಅವರ ಸರ್ಕಾರ ಬಂದರೆ ಈ ಕಾನೂನನ್ನು ವಾಪಸ್ಸು ತೆಗೆದುಹಾಕಬಹುದಲ್ಲವೆ ಎಂದು ಹೇಳಿದರು.
ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ
ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಲು ಹೆಚ್.ವಿಶ್ವನಾಥ್ ರೀತಿ ಸಿ.ಪಿ.ಯೋಗೇಶ್ವರ್ ಕೂಡ ಶ್ರಮವಹಿಸಿದ್ದಾರೆ. ಆದರೆ ವಿಶ್ವನಾಥ್ಗೆ ಅಸಮಾಧಾನ ಇರೋದು ನಿಜ. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಹಾಗಾಗಿ ಯಾಕೆ ಅಂತ ಪ್ರಶ್ನಿಸಬಾರದು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ಹೆಚ್.ವಿಶ್ವನಾಥ್ ಅಸಮಾಧಾನ ಸಂಬಂಧ ಅವರ ಜೊತೆ ಮಾತನಾಡುತ್ತೇನೆ. ಸದ್ಯ ಕೋಪದಲ್ಲಿದ್ದು, ಈಗ ಅವರಿಗೆ ಸಲಹೆ ಕೊಡಲು ಸಾಧ್ಯವಿಲ್ಲ. ಅವರು ಮಾತಾಡಿ ಮುಗಿಸಿದ ನಂತರ ನಾನು ಅವರ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆಯಾದಾಗ ಅಸಮಾಧಾನಗಳು ಉಂಟಾಗುವುದು ಸಹಜ. ಹಾಗಂತ ಎಲ್ಲರಿಗೂ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ವಿಶ್ವನಾಥ್ ಅವರು ಎಡವಿದ್ದಾರೆ. ಸಚಿವ ಸ್ಥಾನ ಕೈ ತಪ್ಪಲು ಅನೇಕ ಕಾರಣಗಳಿದೆ. ಅದನ್ನೆಲ್ಲ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ನಿಗಮ ಮಂಡಳಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ತಪ್ಪು ಮಾಡಿದ್ದಾರೆ. ಈ ಬಗ್ಗೆ ನನಗೆ ಬೇಸರವಿದೆ. ನಾನು ಸೂಚಿಸಿದ ಒಬ್ಬರಿಗೂ ನಿಗಮ ಮಂಡಳಿ ಸ್ಥಾನ ನೀಡಿಲ್ಲ. ಚುನಾವಣೆಯಲ್ಲಿ ಕೆಲಸ ಮಾಡಿದ ಮುಖಂಡರಿಗೆ ಕಾರ್ಯಕರ್ತರಿಗೆ ಇದು ಬೇಸರ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.