February 19, 2026

Newsnap Kannada

The World at your finger tips!

hamsalekha

ಕನ್ನಡದ ಅಸ್ಮಿತೆ ಉಳಿಸಲು ಕನ್ನಡ ಕಲಿಯಿರಿ: ಹಂಸಲೇಖ

Spread the love

ಮೈಸೂರು: ಮಕ್ಕಳನ್ನು ಇಂಗ್ಲಿಷ್​ನಲ್ಲೇ ಓದಿಸಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಕೆಲಸ ಸಿಗುವುದು ಇಂಗ್ಲಿಷ್ ಇದ್ದರೆ ಮಾತ್ರ. ಆದರೆ, ಇಂಗ್ಲಿಷ್ ಅನ್ನು ಕೆಲಸಕ್ಕೆ ಇಟ್ಟುಕೊಳ್ಳಿ, ಕನ್ನಡದ ಅಸ್ಮಿತೆ ಉಳಿಸಲು ಕನ್ನಡವನ್ನು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ‌ ಆಗಬೇಕು ಎಂದು ನಾದಬ್ರಹ್ಮ ಹಂಸಲೇಖ ಅವರು ತಿಳಿಸಿದರು.

ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದು, ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು.

ಕವಿ ಪಟ್ಟ ಬೇಡ

ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಲವರು ನನ್ನ ಆಯ್ಕೆಯನ್ನು ಕಾವ್ಯಕ್ಕೆ ಸಿಕ್ಕ ಗೌರವ ಅಂದರು. ಇನ್ನು ಕೆಲವರು ಸಾಮಾಜಿಕ ನ್ಯಾಯ ಎಂದು ಹೇಳಿದರು. ಆದರೆ, ಅದ್ಯಾವುದನ್ನು ವ್ಯಾಖ್ಯಾನಿಸಲು ಕಷ್ಟ. ನಾವು ಸಿನಿಮಾ ಬರಹಗಾರ. ನನ್ನನ್ನು ಕವಿ ಅಂದರೆ, ಕವಿ ಪಟ್ಟ ಬೇಡ ಎಂದು ಹೇಳುತ್ತೇನೆ.

ಸ್ಮಾರ್ಟ್ ವಿಲೇಜ್

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ವಿಚಾರವಾಗಿ ಮಾತನಾಡಿದ ಹಂಸಲೇಖ, ನಿಜಕ್ಕೂ ಇದನ್ನ ನಾವು ಗಮನಿಸಲೇಬೇಕಿದೆ. ರೈತರ ಬಗ್ಗೆ ನನಗೆ ಕಾಳಜಿ ಇದೆ. ಸ್ಮಾರ್ಟ್ ಸಿಟಿ ಮಾಡಬೇಕೆಂಬುದು ಕೆಲವರ ಆಶಯ. ಆದರೆ, ಇದು ನನಗೆ ಇಷ್ಟವಿಲ್ಲ. ಸ್ಮಾರ್ಟಿ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಮಾಡುವುದು ಮುಖ್ಯ. ಸ್ಮಾರ್ಟ್ ವಿಲೇಜ್ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

error: Content is protected !!