Uncategorized

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 13

ತಮಿಳು ಕನ್ನಡದ ಮಧುರ ಸೇತುವೆ ಪಾ.ಶ. ಶ್ರೀನಿವಾಸ

ಪಾ.ಶ. ಶ್ರೀನಿವಾಸ

​“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕುವೆಂಪು ರವರ ಕವಿವಾಣಿಯನ್ನು ನಿಜವಾಗಿಸಿದವರು ಕನ್ನಡ ಸಾಹಿತ್ಯ ಹಾಗೂ ವಿದ್ವತ್ ಲೋಕದಲ್ಲಿ ಖ್ಯಾತರಾಗಿದ್ದ ಪಾ.ಶ. ಶ್ರೀನಿವಾಸರು, ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ್ದರೂ ಬಾಲ್ಯ ಹಾಗೂ ವಿದ್ಯಾಭ್ಯಾಸವನ್ನು ನಡೆಸಿದ್ದು ಸಕ್ಕರೆ ನಾಡಾದ ಮಂಡ್ಯದಲ್ಲಿ. ಆದರೆ ಕಾಯಕದ ಕ್ಷೇತ್ರವಾಗಿ ಇವರಿಗೆ ಒಲಿದು ಬಂದದ್ದು ತಮಿಳರ ಸಾಂಸ್ಕೃತಿಕ ನಗರಿಯಾದ ಮಧುರೈ. ಐದು ದಶಕಗಳ ಕಾಲ ತಮಿಳುನಾಡಿನಲ್ಲಿ ನೆಲೆ ನಿಂತು ಹೊರನಾಡಿನಲ್ಲಿ ಕನ್ನಡ ಕಟ್ಟಬೇಕೆಂಬ ಮನಸ್ಸುಳ್ಳವರಿಗೆ ಇವರು ಮಾದರಿಯಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ಅನುವಾದ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆ ಅನನ್ಯ. ಅವರ ಈಚಿನ ಅಗಲಿಕೆಯಿಂದ ತಮಿಳು ಕನ್ನಡ ಸಾಹಿತ್ಯ ಕೊಂಡಿಯೊಂದು ಕಳಚಿದಂತಾಗಿದೆ.

​ಪಾ.ಶ. ಶ್ರೀನಿವಾಸರು ತಮ್ಮ ಎಳೆಯ ವಿದ್ಯಾರ್ಥಿ ಜೀವನದಲ್ಲೇ ಮಂಡ್ಯದ ‘ಕಿರಣ ಸಾಹಿತ್ಯ ಸಂಘ’ ದ ಸಕ್ರಿಯ ಸದಸ್ಯರಾಗಿದ್ದು, ‘ಜನ್ಮಭೂಮಿ’ ಎಂಬ ಹಸ್ತಪತ್ರಿಕೆಯ ಸಂಪಾದಕರಾಗಿದ್ದರು. ಮೈಸೂರಿನ ಮಾನಸಗಂಗೋತ್ರಿಯ ಕನ್ನಡ ಎಂ.ಎ. ತರಗತಿಗಳಲ್ಲಿರುವಾಗಲೇ ವಿದ್ವತ್‍ಪೂರ್ಣ ಲೇಖನಗಳನ್ನು ಬರೆದು ಅಂದಿನ ಹಿರಿಯ ಸಾಹಿತಿಗಳ ವೆಚ್ಚುಗೆ ಪಡೆದಿದ್ದರು. ಅ.ರಾ. ಮಿತ್ರ, ಹಂಪನಾಗರಾಜಯ್ಯ, ಎಂ.ಎಚ್. ಕೃಷ್ಣಯ್ಯ, ಲಕ್ಷ್ಮಿನಾರಾಯಣ ಭಟ್ಟಿ, ಕಮಲಾ ಹಂಪನಾ ಮುಂತಾದವರು ಇವರ ಸಹಪಾಠಿಗಳಾಗಿದ್ದರು. ಅರವತ್ತು ವರ್ಷಗಳ ಹಿಂದೆ ವೃತ್ತಿ ಬದುಕಿಗಾಗಿ ಮದ್ರಾಸ್ ಸೇರಿ ಅಲ್ಲಿನ ‘ದಕ್ಷಿಣ ಭಾಷಾ ಪುಸ್ತಕ ಸಂಸ್ಥೆ’ಯ ಸಂಪಾದಕರಾಗಿ ಐದು ವರ್ಷ ಕಾರ್ಯನಿರ್ವಹಿಸಿದರು. ಇದರಿಂದ ಸೋದರ ಭಾಷೆಗಳ ಸಂಪರ್ಕ ಲಭಿಸಿ ತೌಲನಿಕ ಅಧ್ಯಯನಕ್ಕೆ ಒಗ್ಗಿ ಹೋದರು. 1964 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಾರಾಗಿ ಆಯ್ಕೆಯಾಗಿ 8 ವರ್ಷಗಳ ಕಾಲ ಮದ್ರಾಸ್‍ನ ಕನ್ನಡ ಪರ ಚಟುಪಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಶರಣ ಹಾಗೂ ದಾಸ ಸಾಹಿತ್ಯದ ತೌಲನಿಕ ಅಧ್ಯಯನವನ್ನು ಇಂಗ್ಲೀಷ್‍ನಲ್ಲಿ ಬರೆದು ಪಿ.ಹೆಚ್.ಡಿ ಮದ್ರಾಸ್ ವಿಶ್ವವಿದ್ಯಾಲಯದ ಪದವಿಗಳಿಸಿದರು.

​1972ರಲ್ಲಿ ಮಧುರೈ ಕಾಮರಾಜ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಪ್ರಾರಂಭವಾದಾಗ ಅದರ ಮುಖ್ಯಸ್ಥರಾಗಿ ನೇಮಕಗೊಂಡ ಶ್ರೀನಿವಾಸರು 3 ದಶಕಗಳ ಕಾಲ ಮಧುರೈಯಲ್ಲಿ ನೆಲೆಸಿ ಕನ್ನಡ ಹಾಗೂ ತಮಿಳು ಸಾಹಿತ್ಯ ಸೇತುವೆಯಾಗಿ ನಿರಂತರವಾಗಿ ಸಾಹಿತ್ಯ ಸೇವೆ ನಡೆಸಿದರು. ಪಾ.ಶ. ಶ್ರೀನಿವಾಸರ ಕಾರ್ಯನಿಷ್ಠೆ, ಅಧ್ಯಯನಾಸಕ್ತಿ, ಹೊರನಾಡಿನಲ್ಲಿ ಕನ್ನಡವನ್ನು ಬೆಳೆಸಬೇಕೆಂಬ ಸಂಕಲ್ಪ, ಬೇರೆ ಭಾಷೆಯ ವಿದ್ವಾಂಸರೊಂದಿಗಿನ ಸುಮಧುರ ಸಂಬಂಧ ಮುಂತಾದವುಗಳಿಂದಾಗಿ ಮಧುರೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸದೃಢವಾಗಿ ಬೆಳೆಯಿತು. ತಮಿಳುನಾಡಿನ ಶ್ರೇಷ್ಠ ವಿದ್ವಾಂಸರುಗಳಾದ ಡಾ.ಮೀನಾಕ್ಷಿಸುಂದರಂ, ಡಾ. ಟಿ.ಬಿ. ಸಿದ್ದಲಿಂಗಯ್ಯ ಮುದಮಾರಿ ಜಗನ್ನಾಥರಾಜು, ಸುಂದರಮೂರ್ತಿ, ಟಿ. ಕೋದಂಡರಾಮಯ್ಯ ಮುಂತಾದವರು ಇವರ ಒಡನಾಡಿಗಳಾಗಿದ್ದು ತೌಲನಿಕ ಅಧ್ಯಯನ ಹಾಗೂ ಅನುವಾದ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳಾದವು. ಇವರು ಮಾಡಿದ “ತಿರು ಕುರುಳ್”ನ ಸಮಗ್ರ ಅನುವಾದವು ಕನ್ನಡ ಭಾಷಾಂತರ ಕ್ಷೇತ್ರದಲ್ಲಿ ಅದ್ವೀತಿಯವಾದದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಈ ಕೃತಿಗೆ ಲಭಿಸಿದೆ. ಹೊರನಾಡಿನ ವಿಶ್ವವಿದ್ಯಾಲಯವೊಂದು ಈ ಕನ್ನಡ ಕೃತಿಯನ್ನು ಪ್ರಕಟಿಸಿರುವುದು ಈ ಪುಸ್ತಕದ ಹೆಚ್ಚುಗಾರಿಕೆಯಾಗಿದೆ. ಇವತ್ತಿಗೂ ತಮಿಳರು ಶ್ರೀನಿವಾಸರ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ತಮಿಳರ ಪಾಲಿಗೆ “ತಿರುವಳ್ಳುವರ್” ಎಂದರೆ ದೇವರ ಸಮಾನ ಪಾ.ಶ. ಶ್ರೀನಿವಾಸರು ಕನ್ನಡದಲ್ಲಿ ಅವರ ಬಗ್ಗೆ ಕೃತಿಯನ್ನು ರಚಿಸಿದ್ದಾರೆ. ಅಸಂಖ್ಯ ಶಿಷ್ಯರಿಗೆ ಮಾರ್ಗದರ್ಶಕರಾಗಿ ಕನ್ನಡದಲ್ಲಿ ಉತ್ತಮ ಪ್ರೌಢ ಪ್ರಬಂಧಗಳು ರಚನೆಯಾಗಲು ಕಾರಣರಾಗಿದ್ದಾರೆ. ಇವರ “ಸಾಹಿತ್ಯ ಕಾವೇರಿ” ಕನ್ನಡ ತಮಿಳು ಸಾಹಿತ್ಯ ಸಂಬಂಧದ ಕುರಿತಾದ ವಿದ್ವತ್‍ಪೂರ್ಣ ಲೇಖನಗಳ ಸಂಕಲನವಾಗಿದ್ದು ಪೌಢ ಅಧ್ಯಯಶೀಲ ಕೃತಿಯಾಗಿದೆ.

​ಡಾ.ಪಾ.ಶ. ಶ್ರೀನಿವಾಸರ ಇನ್ನೊಂದು ಸಾಧನೆಯೆಂದರೆ ಮಧುರೈಯಲ್ಲಿ ‘ಕರ್ನಾಟಕ ಸಂಘ’ ವನ್ನು ಬೆಳೆಸಿದ್ದು ‘ಸಾಕಷ್ಟು ಕಾಲ ಆ ಸಂಘಕ್ಕೆ ಇವರೇ ಅಧ್ಯಕ್ಷರಾಗಿದ್ದರು. ಡಾ. ಶಿವರಾಮಕಾರಂತ, ಡಾ.ಜಿ.ಎಸ್. ಶಿವರುದ್ರಪ್ಪ, ಡಾ. ಚಿದಾನಂದ ಮೂರ್ತಿ, ಡಾ. ಹಂಪನಾ, ಡಾ.ಕೆ.ಎಂ.ಕೃಷ್ಣರಾವ್ ಮುಂತಾದ ಶ್ರೇಷ್ಠ ಕನ್ನಡ ಸಾಹಿತಿಗಳನ್ನು, ವಿದ್ವಾಂಸರನ್ನು ಮಧುರೈಗೆ ಕರೆಸಿ ಅಲ್ಲಿನವರಿಗೆ ಕನ್ನಡ ಸಂಸ್ಕೃತಿಯ ಸವಿಯನ್ನು ಪರಿಚಯಿಸಿದರು. 1986ರಲ್ಲಿ ಕರ್ನಾಟಕ ಸಂಘದ ಬೆಳ್ಳಿ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಿ ತಮಿಳು ಕನ್ನಡ ಬಾಂಧವ್ಯಗಳಿಗೆ ಸಂಬಂಧಿಸಿದ ಗೋಷ್ಠಿಗಳನ್ನು ಏರ್ಪಡಿಸಿದರು. ನಿವೃತ್ತಿಯ ನಂತರವೂ ತಮಿಳುನಾಡಿನಲ್ಲೇ ಇದ್ದು ಕನ್ನಡ-ತಮಿಳು ದ್ವಿಭಾಷಾ ನಿಘಂಟನ್ನು ರಚಿಸುವಲ್ಲಿ ಸಕ್ರಿಯರಾದರು. ಇದರಲ್ಲಿ 40000 ಕ್ಕೂ ಹೆಚ್ಚು ಪದಸಂಗ್ರಹವಿದ್ದು ತಮಿಳು ಕನ್ನಡ ಅನುವಾದಕರಿಗೆ ಇದೊಂದು ಮಾದರಿಯ ಉತ್ಕøಷ್ಟ ಆಧಾರ ಗ್ರಂಥವಾಗಿದೆ. ಆದ್ದರಿಂದಿಲೇ ತಮಿಳು ಶಾಸ್ತ್ರೀಯ ಭಾಷಾ ಪ್ರಾಧಿಕಾರದ ಯೋಜನೆಯಾದ “ಸಂಗಂ ಸಾಹಿತ್ಯ”ದ ಕನ್ನಡ ಅನುವಾದ ಕಾರ್ಯಗಳಿಗೆ ಇವರು ಮಾರ್ಗದರ್ಶಕರಾಗುವಂತಾದರು. ‘ಕಾವ್ಯಾನುಶೀಲನ’ ಎಂಬ ವಿಮರ್ಶಾ ಕೃತಿ” ‘ಹೆಜ್ಜೆ ಗುರುತು’ ಎಂಬ ಲೇಖನಗಳ ಸಂಕಲನ, ‘ಚಿತ್ತಾರ’ ಎಂಬ ಸಣ್ಣಕತೆಗಳ ಸಂಗ್ರಹ “ಸಾರೂಪ್ಯ” ಎಂಬ ಅಧ್ಯಯನಪೂರ್ಣ ಪ್ರಬಂಧಗಳ ಸಂಕಲನ, ಅನೇಕ ತಮಿಳು ಅನುವಾದ ಕೃತಿಗಳು ಹೇಗೆ ಒಟ್ಟು 27ಕ್ಕೂ ಹೆಚ್ಚು ಕೃತಿಗಳನ್ನು ಡಾ. ಪಾ.ಶ. ಶ್ರೀನಿವಾಸರು ರಚಿಸಿದ್ದು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.

​ಡಾ. ಪಾ.ಶ. ಶ್ರೀನಿವಾಸ ಹಾಗೂ ಶ್ರೀಮತಿ ಸುಶೀಲ ದಂಪತಿಗಳದ್ದು ಅನುರೂಪದಾಂಪತ್ಯ ಅತಿಥಿ ಸತ್ಕಾರಕ್ಕೆ ಹೇಳಿ ಮಾಡಿಸಿದ ಕುಟುಂಬ. ಕನ್ನಡದ ಹಿರಿಯ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು ಚೆನೈ ಹಾಗೂ ಮಧುರೈಗೆ ಬರುವ ಕರ್ನಾಟಕದ ಅತಿಥಿಗಳು ಅವರ ಆಪ್ತ ಹಾಗೂ ಪ್ರೀತಿಯ ಸತ್ಕಾರವನ್ನು ಸವಿದಿದ್ದಾರೆ.

ಡಾ.ಆನಂದರಾಮಉಪಾಧ್ಯ
ಆವಲಹಳ್ಳಿ ಬೆಂಗಳೂರು
Team Newsnap
Leave a Comment
Share
Published by
Team Newsnap

Recent Posts

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024

ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More

May 16, 2024

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ

ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)… Read More

May 15, 2024