ಕನ್ನಡ ನಿಘಂಟು ತಜ್ಞ ಗಂಜಾಂನ‌ ಪ್ರೊ.ಜಿ ವೆಂಕಟಸುಬ್ಬಯ್ಯ ವಿಧಿವಶ

Team Newsnap
1 Min Read

ಮಂಡ್ಯ ಜಿಲ್ಲೆಯ ಗಂಜಾಂ ಮೂಲ ನಿವಾಸಿ, ಶತಾಯುಷಿ, ನಿಘಂಟು ತಜ್ಞ, ಕನ್ನಡದ ರತ್ನ ಪ್ರೊ. ಜಿ ವೆಂಕಟಸುಬ್ಬಯ್ಯ ಬಾನುವಾರ ಮದ್ಯರಾತ್ರಿ ನಂತರ ಕೊನೆಯುಸಿರೆಳೆದರು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ,
ಪದ್ಮಶ್ರೀ ಪ್ರೊ. ವೆಂಕಟಸುಬ್ಬಯ್ಯ(108) ಮಧ್ಯರಾತ್ರಿ 1.30ರ ಸುಮಾರಿಗೆ ಇಹ ಲೋಕ ತ್ಯಜಿಸಿದರು.

1913 ಆಗಸ್ಟ್ 23 ರಂದು ಮೈಸೂರಿನಲ್ಲಿ ಜನಿಸಿದ ಇವರು, ಪದ್ಮಶ್ರೀ, ನಾಡೋಜ, ಪಂಪ ಪ್ರಶಸ್ತಿ, ಭಾಷಾ ಸಮ್ಮಾನ್ ಪುರಸ್ಕೃತರಾಗಿದ್ದರು. ಕನ್ನಡದ ಏಳಿಗೆಗಾಗಿ ದುಡಿದವರಾಗಿದ್ದು, ಭಾಷಾ ತಜ್ಞ, ಸಂಶೋಧಕ, ಬರಹಗಾರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡದ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.

ಮೂತ್ರ ನಾಳದ ಸೋಂಕಿನಿಂದ ಬಳಲುತ್ತಿದ್ದ ಜಿ. ವೆಂಕಟಸುಬ್ಬಯ್ಯ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಎಂಟು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಮೂತ್ರ ನಾಳದ ಸೋಂಕಿನಿಂದ ಗುಣಮುಖರಾಗಿದ್ದ ಕಾರಣ ವೈದ್ಯರು ಇಂದು ಡಿಸ್ಚಾರ್ಜ್ ಮಾಡುವ ಮಾಹಿತಿ ನೀಡಿದ್ದರು. ಆದರೆ ತಡರಾತ್ರಿ ಮೃತಪಟ್ಟಿದ್ದಾರೆ.

Share This Article
Leave a comment