ಜಲ್ಲಿ ಕ್ರಷರ್ ನಲ್ಲಿ ಜಿಲೆಟಿನ್ ಸ್ಫೋಟ: 8 ಮಂದಿ ಬಿಹಾರ ಕಾರ್ಮಿಕರು ಸಾವು

Team Newsnap
2 Min Read

ಕಲ್ಲು ಗಣಿಯಲ್ಲಿ ಸಂಭವಿಸಿದ ಭೀಕರ ಸ್ಪೋಟದಿಂದಾಗಿ 8 ಮಂದಿ ಬಿಹಾರ ಮೂಲದ ಕಾರ್ಮಿಕರು ಬಲಿಯಾದ ಘಟನೆ ಶಿವಮೊಗ್ಗ ದಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಶಿವಮೊಗ್ಗ ಹೊರವಲಯದ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್​ನಲ್ಲಿ ಗುರುವಾರ ರಾತ್ರಿ 10.20ರ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿತು.

ಈ ಭೀಕರ ದುರಂತ ದಲ್ಲಿ ಬಿಹಾರ ಮೂಲದ 8 ಕಾರ್ವಿುಕರು ಸಾವನ್ನಪ್ಪಿದರು. ‌ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ.

ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಎಷ್ಟು ಜನ ಇದ್ದರು ಎಂಬುದು ಖಚಿತವಾಗಿ ಗೊತ್ತಾಗಿಲ್ಲ. ಮೃತ ದೇಹಗಳು ಅಲ್ಲಲ್ಲಿ ಛಿದ್ರಗೊಂಡು ಬಿದ್ದಿರುವುದು ಘಟನೆಯ ಭೀಕರತೆಯನ್ನು ಎತ್ತಿ ತೋರಿಸುತ್ತದೆ.

ಸ್ಪೋಟದಿಂದಲೇ ದುರಂತ ಸಂಭವಿಸಿರುವುದು ದೃಢಪಟ್ಟಿದೆ. ಆದರೆ ಸ್ಪೋಟಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ.

ಕಳೆದ ರಾತ್ರಿ ಲಾರಿಯಲ್ಲಿ ಸ್ಪೋಟಕಗಳನ್ನು ತರಲಾಗಿತ್ತು, ಈ ಲಾರಿಯೇ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಸ್ಪೋಟದಿಂದಾಗಿ ಕೆಟ್ಟ ವಾಸನೆ ಉಂಟಾಗಿದ್ದು ಘಟನಾ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.

ದುರಂತ ಸಂಭವಿಸಿದ ಸ್ಥಳದಲ್ಲಿ ಕತ್ತಲು ಇರುವುದರಿಂದ ಕಾರ್ಯಾಚರಣೆಗೂ ಸಮಸ್ಯೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯಕ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಭೀಕರ ದುರಂತಕ್ಕೆ ಕಿವಿ ಕೇಳಿಸಲಿಲ್ಲ :

  • ಶಿವಮೊಗ್ಗ ಸಮೀಪ ಗುರುವಾರ ರಾತ್ರಿ ಭೀಕರ ಸ್ಪೋಟದ ಸದ್ದು ಕೇಳಿ ಬಂದ ಸಮಯದಲ್ಲೇ ಕ್ರಷರ್​ನಲ್ಲೂ ಸ್ಫೋಟ ಸಂಭವಿಸಿದೆ.
  • ಸವಳಂಗ ರಸ್ತೆಯಲ್ಲಿ ಬರುವ ವಿವಿಧ ಬಡಾವಣೆಗಳು, ಇಂಜಿನಿಯರಿಂಗ್ ಕಾಲೇಜು ಪ್ರದೇಶದಲ್ಲಿ ಬಿರುಗಾಳಿ ಜತೆಗೆ ಸ್ಪೋಟದ ಸದ್ದು ಕೇಳಿದೆ.
  • ಸ್ಪೋಟದ ಭೀಕರತೆಗೆ ಘಟನಾ ಸ್ಥಳ ಸಮೀಪದಲ್ಲಿರುವ ಜನರ ಕಿವಿಗಳು ಕೇಳಿಸದಂತಾಗಿವೆ
  • ಕ್ರಷರ್​ನಲ್ಲಿ ಸ್ಫೋಟ ಸಂಭವಿಸಿದ್ದರೂ ಭೂಕಂಪನದ ಅನುಭವ ಇರಬೇಕು ಎಂದು ಬಹುತೇಕರು ಭಾವಿಸಿದ್ದರು. ಹೀಗಾಗಿ ಈ ಘಟನೆ ತಕ್ಷಣಕ್ಕೆ ಬೆಳಕಿಗೆ ಬರಲಿಲ್ಲ.
  • ಶಿವಮೊಗ್ಗ ಹುಣಸೋಡು ಬಳಿ ರೈಲ್ವೆ ಕ್ರಷರ್​ಗೆ ಜಿಲೆಟಿನ್ ಕಡ್ಡಿ ತಂದಿದ್ದ ಲಾರಿ ಸ್ಪೋಟಗೊಂಡಿದೆ.
  • ಭಾರಿ ಸ್ಪೋಟ ಕೇಳಿ ಬಂದ ಹಾಗೂ ಕೆಟ್ಟ ವಾಸನೆ ಬರುತ್ತಿತ್ತು. ಪೋಲಿಸರು ಹಾಗೂ ಜನ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿ ಭೀಕರವಾಗಿತ್ತು.
  • ಆರು ಛಿದ್ರಗೊಂಡ ದೇಹಗಳು ಪತ್ತೆಯಾಗಿವೆ. ಲಾರಿಗೆ ಸಂಪೂರ್ಣ ಹಾನಿಯಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಕೆಟ್ಟ ವಾಸನೆ ಹರಡಿದೆ
  • ದುರಂತ ನಡೆದ ಸ್ಥಳವನ್ನು ಪ್ರವೇಶಿಸಲಾಗದ ಪರಿಸ್ಥಿತಿ ನಿರ್ವಣವಾಗಿದೆ. ಲಘು ಭೂಕಂಪದ ನಂತರ ಲಾರಿಯಲ್ಲಿನ ಜಿಲೆಟಿನ್ ಕಡ್ಡಿಗಳು ಸ್ಪರ್ಶಗೊಂಡು ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ.
  • ಕಿಲೋಮೀಟರ್​ವರೆಗೆ ಮನೆಗಳ ಗಾಜು,ಒಡೆದು ಹೋಗಿದ್ದು ಮನೆಗಳ ಗೋಡೆ ಬಿರುಕು ಬಿಟ್ಟಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಲಘು ಭೂಕಂಪ :

ಕ್ರಷರ್ ಪ್ರದೇಶದಲ್ಲಿ ಸ್ಪೋಟಕಗಳು ತುಂಬಿದ್ದ ಲಾರಿ ನಿಂತಿತ್ತು. ರಾತ್ರಿ 10.20ರ ಸಮಯದಲ್ಲಿ ಜಿಲ್ಲೆಯಾದ್ಯಂತ ಭೂಮಿ ಕಂಪಿಸಿ ದೊಡ್ಡ ಪ್ರಮಾಣದಲ್ಲಿ ಶಬ್ಧ ಉಂಟಾದಾಗ ಲಾರಿ ಕೂಡ ಅಲುಗಾಡಿ ಅದರಲ್ಲಿದ್ದ ಸ್ಪೋಟಕಗಳ ನಡುವೆ ಘರ್ಷಣೆಯಿಂದ ಈ ದುರಂತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

Share This Article
Leave a comment