ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲಿ ಖ್ಯಾತಿ ಆಗಿರುವ ಅಮೃತಾ ನಾಯ್ಡು ಅವರ ಬದುಕಿನಲ್ಲಿ ದುರಂತವೊಂದು ಸಂಭವಿಸಿತ್ತು. ಇದೀಗ ಆ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಅಮೃತಾ ನಾಯ್ಡು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಕಳೆದ ಜನವರಿ 13ರಂದು ಅಮೃತಾ ಅವರ ಪುತ್ರಿ ಸಮನ್ವಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಅಮೃತಾ ಮತ್ತು ಸಮನ್ವಿ ಕೋಣನಕುಂಟೆಯ ವಾಜರಹಳ್ಳಿಯ ಬಳಿ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಆ ವೇಳೆ ಟಿಪ್ಪರ್ ಲಾರಿಯೊಂದು ಅಮೃತಾ ಮತ್ತು ಸಮನ್ವಿ ಇದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು.
ಸಮನ್ವಿ ಸಾವಿಗೆ ಅನೇಕರು ಕಂಬನಿ ಮಿಡಿದು ಮರುಗಿದ್ದರು. ಬಾಲ್ಯದಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಸಮನ್ವಿ, ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ್ದು ನೋವು ತಂದಿತ್ತು. ಆ ಸಮಯದಲ್ಲಿಅಮೃತಾ ಅವರು ಗರ್ಭಿಣಿಯಾಗಿದ್ದರು. ಇದೀಗ ಮಗು ಜನಿಸಿರುವುದಕ್ಕೆ ಆ ಕುಟುಂಬದಲ್ಲಿ ಸಂತಸ ಮರಳಿದೆ.
ಕಳೆದ ಕೆಲವು ತಿಂಗಳಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸಿದ್ದ ಅಮೃತಾಗೆ ಈಗ ಮಗನ ಆಗಮನದಿಂದ ಸಂತಸ ಉಂಟಾಗಿದೆ. ತಮಗೆ ಗಂಡು ಮಗು ಜನಿಸಿರುವ ಬಗ್ಗೆ ಅಮೃತಾ ಮತ್ತು ರೂಪೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
ತಮಗೆ ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ಅಮೃತಾ ಮತ್ತು ರೂಪೇಶ್ ದಂಪತಿ ಧನ್ಯವಾದಗಳನ್ನು ತಿಳಿಸಿದ್ದಾರೆ. ‘ನಮ್ಮ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ಇರುವುದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಈಗ ನಮ್ಮ ಜೀವನವು ಹೊಸ ಛಾಯೆಯೊಂದಿಗೆ ಹೊಸದಾಗಿ ಆರಂಭವಾಗಿದೆ. ನಿಮ್ಮೆಲ್ಲರ ನಿರಂತರ ಆಶೀರ್ವಾದ ಮತ್ತು ಹಾರೈಕೆಗಳೊಂದಿಗೆ ನಮಗೆ ಗಂಡು ಮಗು ಜನಿಸಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ..’ ಎಂದು ಅಮೃತಾ ತಿಳಿಸಿದ್ದಾರೆ.
ಮನವಿ ಮಾಡಿಕೊಂಡಿದ್ದ ಅಮೃತಾ ನಾಯ್ಡು
ಕೆಲ ತಿಂಗಳ ಹಿಂದಷ್ಟೇ ಒಂದು ಪೋಸ್ಟ್ ಹಾಕಿದ್ದ ಅಮೃತಾ, ‘ಆ ದುರಾದೃಷ್ಟದ ದಿನ ಸಿಡಿಲು ಬಡಿದ ನಂತರ ನನ್ನ ಪ್ರಪಂಚ ನಲುಗಿತು. ನನಗೆ ಹಿಡಿದಿಡಲು ಏನೂ ಇಲ್ಲ ಎಂದು ಅನಿಸಿತು. ನಾನು ಉಸಿರಾಡುತ್ತಿದ್ದರೂ ಒಳಗಡೆ ಸತ್ತು ಹೋಗಿದ್ದೇನೆ ಎಂದು ಭಾವಿಸಿದೆ. ಎಲ್ಲ ವಿಶೇಷ ವ್ಯಕ್ತಿಗಳ, ನಿಮ್ಮ ಹಾರೈಕೆಯಿಂದ ನನ್ನೊಳಗಿನ ಜೀವದ ನೆನಪಾಗುತ್ತಿತ್ತು. ನನ್ನೊಳಗೆ ಇನ್ನೊಂದು ಜೀವವಿದೆ, ನಾನು ಆ ಬೆಳಕನ್ನು ನೋಡುತ್ತೇನೆ ಎಂದು ನೆನಪಿಸುತ್ತಿದ್ದೀರಿ.
ಜೀವನ ಅಂದರೆ ಅದು ನಾನು ಮಾತ್ರ ಅಲ್ಲ, ಎಂದಿಗೂ ಮಾಯದ ನೋವುಗಳು ಇರುತ್ತವೆ. ಆದರೂ ಎಲ್ಲ ಭಾವನೆಗಳನ್ನು ನಾನು ನನ್ನ ಮೇಲೆ ಹಾಕಿಕೊಳ್ಳಲಾಗದು. ಇಂದು ನೋವು ನನಗೆ ಮಾತ್ರ ಇರಲಿ, ಅದು ಯಾವುದಕ್ಕೆ ಕಾರಣಕ್ಕೂ ನನ್ನ ಮಗುಗೆ ತಿಳಿಯಬಾರದು. ನಾನು ಖುಷಿಯಾಗಿರುವುದನ್ನು ಮಾತ್ರ ಆ ಮಗು ನೋಡಬೇಕು ಎಂದು ಅರಿತುಕೊಂಡಿದ್ದೇನೆ. ನನ್ನ ಸಮನ್ವಿ ಮತ್ತೆ ಬಂದರೆ ಎಲ್ಲವೂ ಫ್ರೆಶ್ ಆಗಿರುತ್ತದೆ. ನಾನು ಆ ಸೆಲೆಬ್ರೇಶನ್ ಅನ್ನು ಮಿಸ್ ಮಾಡಲು ಬಯಸುವುದಿಲ್ಲ. ನೀವೆಲ್ಲ ನನ್ನ ಶಕ್ತಿಯಾಗಿ, ಉಳಿದುಕೊಳ್ಳಲು ಸಹಾಯ ಮಾಡಿ..’ ಎಂದಿದ್ದರು.
‘ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಸಮನ್ವಿ ಮತ್ತು ಅಮೃತಾ ಭಾಗವಹಿಸಿದ್ದರು. ಸಾಕಷ್ಟು ಜನಪ್ರಿಯತೆ ಅವರಿಬ್ಬರಿಗೆ ಸಿಕ್ಕಿತ್ತು. ಅದಕ್ಕೂ ಮುನ್ನ ‘ಪುಣ್ಯಕೋಟಿ’ ‘ಕುಸುಮಾಂಜಲಿ’ ‘ಮನೆಯೊಂದು ಮೂರು ಬಾಗಿಲು’ ‘ಅಮೃತ ವರ್ಷಿಣಿ’ ‘ನಾಗಿಣಿ’ ‘ಗೀತಾ’ ಧಾರಾವಾಹಿಗಳಲ್ಲಿ ಅಮೃತಾ ನಟಿಸಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ