ನಾನಾ ಕಾರಣಗಳಿಗಾಗಿ ನ್ಯಾಯಾಲಯದ ಕಲಾಪದಿಂದ ಹೊರಗುಳಿದ ಮಂಡ್ಯ ಹಾಗೂ ದಾವಣಗೆರೆ ವಕೀಲರ ಸಂಘಗಳ ವಿರುದ್ಧ ಹೈಕೋರ್ಟ್ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ಕೋರ್ಟ್ ಕಲಾಪಗಳಿಂದ ದೂರ ಉಳಿದ ಎರಡೂ ಜಿಲ್ಲೆಗಳ ವಕೀಲರ ಸಂಘ ಮತ್ತು ಅವುಗಳ ಪದಾಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಪೀಠವು, ಸಂಘಗಳ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿಕೊಂಡು, ನೋಟಿಸ್ ಜಾರಿಗೊಳಿಸಲು ರಿಜಿಸ್ಟಾರ್ ರಿಗೆ ನಿರ್ದೇಶಿಸಿತು.
ಪ್ರಕರಣ ಏನು?
ಕಳೆದ ಜ. 4ರಂದು ಮಂಡ್ಯ ವಕೀಲರ ಸಂಘ ತನ್ನ ಸದಸ್ಯ ವಕೀಲರಿಗೆ ನ್ಯಾಯಾಲಯದ ಕಲಾಪದಿಂದ ಹೊರಗುಳಿಯುವಂತೆ ಕರೆ ನೀಡಿತ್ತು. ಅಂತೆಯೇ ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್. ಪೇಟೆ ವಕೀಲರ ಸಂಘಗಳೂ ಸಹ ಜ. 4 ಹಾಗೂ ಜ. 6ರಂದು ಕಲಾಪದಿಂದ ಹೊರಗುಳಿದಿದ್ದವು. ನಾನಾ ಕಾರಣಗಳಿಂದಾಗಿ ಪಾಂಡವಪುರ ವಕೀಲರ ಸಂಘ ಕೂಡ ಜ. 4, 15 ಮತ್ತು 30ರಂದು ಕೋರ್ಟ್ ಕಲಾಪದಿಂದ ಹೊರಗುಳಿಯುವಂತೆ ವಕೀಲರಿಗೆ ಸೂಚಿಸಿತ್ತು.
ಕೋವಿಡ್ನಿಂದಾಗಿ ರಾಜ್ಯಾದ ಎಲ್ಲಾ ಕೋರ್ಟ್ ಕಲಾಪಗಳಿಗೂ ಅಡ್ಡಿಯಾಗಿದೆ, ಇದರಿಂದ ಕಕ್ಷಿದಾರರಿಗೆ ಮಾತ್ರವಲ್ಲದೆ, ವಕೀಲರಿಗೂ ತೊಂದರೆಯಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವ ಈ ಹೊತ್ತಲ್ಲಿ ಜಿಲ್ಲಾ ಮಟ್ಟದ ವಕೀಲರ ಸಂಘಗಳು ನ್ಯಾಯಾಲಯದ ಕಲಾಪಗಳಿಗೆ ಬಹಿಷ್ಕಾರ ಹಾಕುತ್ತಿರುವುದು ಹಾಗೂ ಕಲಾಪದಿಂದ ಹೊರಗುಳಿಯುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.