ಡಿಜಿಟಲ್ ಕ್ಷೇತ್ರವನ್ನು ವಿನೂತನವಾಗಿ ಬಳಸಿಕೊಂಡು ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಲು ಜಿಲ್ಲಾ ವಾರ್ತಾ ಕಚೇರಿಗಳು ಸಜ್ಜಾಗಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಕರ ನೀಡಿದರು.
ಶುಕ್ರವಾರ ಮೈಸೂರಿನಲ್ಲಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಹರ್ಷ ವಾರ್ತಾ ಇಲಾಖೆಯಿಂದ ನಿರಂತರವಾಗಿ ಕ್ಷಣ ಕ್ಷಣದ ಸುದ್ದಿಗಳು ಪ್ರಕಟವಾಗುವಂತೆ ಜಿಲ್ಲಾ ಕಚೇರಿಗಳು ಬಲವರ್ಧನೆ ಆಗಬೇಕು. ಅದಕ್ಕೆ ಅವಶ್ಯಕವಿರುವ ನೆರವನ್ನು ನೀಡಲಾಗುವುದು ಎಂದು ತಿಳಿಸಿದರು.
ಕಡಿಮೆ ಸಂಖ್ಯೆಯ ನೌಕರರನ್ನು ಹೊಂದಿರುವ ಇಲಾಖೆಯಲ್ಲಿ ನೌಕರರ ನಡುವೆ ಮಾನವೀಯ ಸಂಬಂಧ ಸರಿಇರಬೇಕು. ಎಲ್ಲರಲ್ಲೂ ಒಂದು ತಂಡವಾಗಿ ಕೆಲಸ ಮಾಡುವ ಮನೋಭಾವ ಕಟ್ಟೋಣ ಎಂದರು.
ಅಧಿಕಾರಿಗಳು ಮತ್ತು ನೌಕರರು ವೃತ್ತಿಪರತೆ ಬೆಳಸಿಕೊಳ್ಳಬೇಕು. ಇದಕ್ಕಾಗಿ ತರಬೇತಿ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುವುದು.
ಪೊಲೀಸ್ ಡ್ಯೂಟಿ ಮೀಟ್ ಮಾದರಿಯಲ್ಲಿ ವಾರ್ತಾ ಇಲಾಖೆಯಲ್ಲಿ ಕುಟುಂಬದ ಸದಸ್ಯರೂ ಸೇರಿದಂತೆ ವರ್ಷದಲ್ಲಿ ಒಮ್ಮೆ ಎಲ್ಲರೂ ಸೇರಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಆಯೋಜಿಸುವ ಬಗ್ಗೆ ಆಲೋಚಿಸಲಾಗಿದೆ ಎಂದರು.
ಸಭೆಯಲ್ಲಿ ಉಪ ನಿರ್ದೇಶಕರಾದ ವಿನೋದ್ ಚಂದ್ರ, ಸಿ.ಆರ್. ನವೀನ್, ಸಹಾಯಕ ನಿರ್ದೇಶಕರಾದ ಆರ್. ರಾಜು, ಜೆ. ಮಂಜೇಗೌಡ, ಟಿ.ಕೆ. ಹರೀಶ್, ರಮೇಶ್, ಚಿನ್ನಸ್ವಾಮಿ, ಮಂಜುನಾಥ್, ವಿಷ್ಣುವರ್ಧನ್ ಪ್ರತಿಷ್ಠಾನದ ಕಾರ್ಯದರ್ಶಿ ವಿಜಯಾನಂದ ಮತ್ತಿತರರು ಉಪಸ್ಥಿತರಿದ್ದರು.