March 13, 2026

Newsnap Kannada

The World at your finger tips!

ashok pa1

ಲಂಚಕ್ಕೆ ಬೇಡಿಕೆ ಆರೋಪ – ಸಚಿವ ಅಶೋಕ್ ಪಿಎ ವಿರುದ್ಧ ಎಫ್‍ಐಆರ್

Spread the love
  • ಪ್ರಕರಣ ದಾಖಲಿಸಿ ತನಿಖೆಗೆ ಸೂಚಿಸಿದ ನ್ಯಾಯಾಲಯ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರಿಂದ ಲಂಚ ಕೇಳಿದ ಕಂದಾಯ ಸಚಿವ ಆರ್. ಅಶೋಕ್ ಪಿ.ಎ ಗಂಗಾಧರ್ ವಿರುದ್ಧ ಶೃಂಗೇರಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಜ. 20ರಂದು ವಾಟ್ಸಪ್ ಕಾಲ್ ಮಾಡಿದ್ದ ಅಶೋಕ್ ಪಿಎ ಗಂಗಾಧರ್, 24ರಂದು ಸಚಿವರು ಶೃಂಗೇರಿಗೆ ಬರುತ್ತಾರೆ. ನೀವು ಬನ್ನಿ ಎಂದು ಹೇಳಿದ್ದರು.‌

24ರಂದು ಸಂಜೆ 6 ಗಂಟೆಗೆ ಸಬ್ ರಿಜಿಸ್ಟ್ರಾರ್ ಚೆಲುವರಾಜು ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನಕ್ಕೆ ಬಂದಿದ್ದರು. ಸಚಿವರು ಸಂಜೆ 7.30ಕ್ಕೆ ಶೃಂಗೇರಿಗೆ ಭೇಟಿ ನೀಡಿದ್ದರು.

ಆಗ ಪಿ.ಎ. ಗಂಗಾಧರ್ ಅಲ್ಲೇ ಇದ್ದ ಒಂದು ರೂಮಿನಲ್ಲಿ ಭೇಟಿಯಾಗಿ ಏನಿದೆ ಕೊಡಿ ಎಂದಿದ್ದರು. ಇದೇ ವೇಳೆ ಚೆಲುವರಾಜು, ನಾನು ಯಾರಿಗೂ ಹಣ ಕೊಡುವುದಿಲ್ಲ. ಯಾರಿಂದಲೂ ಹಣ ಪಡೆಯುವುದಿಲ್ಲ ಎಂದಿದ್ದರು. ಅದಕ್ಕೆ ಅವರು ಆಯ್ತು ಹೋಗಿ ಎಂದಿದ್ದರು. ಕೈಯಲ್ಲಿದ್ದ ಪೇಪರ್ ನೋಡಿ ಏನದು ಎಂದು ಕೇಳಿದ್ದರು. ನಾನು ದೂರಿನ ಪ್ರತಿ. ಕರ್ನಾಟಕ ಸೆಕ್ರೆಟರಿಗೆ ಕಳಿಸಿದ್ದೇನೆ. ಸಚಿವರಿಗೂ ಕೊಡಿ ಎಂದು ಹೇಳಿದೆ. ಅವರು ನೀವೇ ಕೊಡಿ ಎಂದು ಹೋದರು.

ಸಚಿವರ ಪಿ.ಎ. ಗಂಗಾಧರ್ ರಾತ್ರಿ ಮತ್ತೆ ಫೋನ್ ಮಾಡಿದ್ದರು. ನಾನು ನೋಡಿರಲಿಲ್ಲ, ನಾನು ಬೆಳಗ್ಗೆ ಫೋನ್ ಮಾಡಿದ್ದಕ್ಕೆ ಏನೋ… ಫೈಲ್ ಕೊಡುತ್ತೇನೆ ಎಂದು ಹೇಳಿ ಕೊಡಲಿಲ್ಲ ಎಂದರು. ನಾನು ಯಾವ ಫೈಲ್ ಇಲ್ಲ. ನೀವು ಲಂಚ ಕೇಳಿದ್ರಿ ನಾನು ಇಲ್ಲ ಎಂದು ಹೇಳಿದ್ದೆ ಎಂದು ಚೆಲುವರಾಜು ಹೇಳಿದ್ದರಂತೆ.

ಸರ್ಕಾರಿ ಅಧಿಕಾರಿಯಿಂದ ಲಂಚ ಕೇಳಿದ ಬಗ್ಗೆ ಹಾಗೂ ನಿನ್ನ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆಂದು ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸರ್ಕಾರಿ ಅಧಿಕಾರಿಯಾಗಿರುವುದರಿಂದ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ಶೃಂಗೇರಿ ಜೆಎಂಎಫ್‍ಸಿ ನ್ಯಾಯಾಲಯದ ಅನುಮತಿ ಕೋರಿದ್ದರು.

ಈ ಬಗ್ಗೆ ಶೃಂಗೇರಿ ನ್ಯಾಯಾಲಯ ಕೂಡ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿರೊ ಹಿನ್ನೆಲೆ ಶೃಂಗೇರಿ ಪೊಲೀಸರು ಎಫ್‍ಐಆರ್ ತನಿಖೆ ಕೈಗೊಂಡಿದ್ದಾರೆ.

error: Content is protected !!