February 17, 2026

Newsnap Kannada

The World at your finger tips!

, suicide, harrasment , crime

ಅಬಕಾರಿ ಅಧಿಕಾರಿ ಮತ್ತು ಕುಟುಂಬದ ಸದಸ್ಯರು ಶವವಾಗಿ ಪತ್ತೆ

Spread the love

ತಿರುವನಂತಪುರಂ: ಕೇರಳದ ಎರ್ನಾಕುಲಂ ಜಿಲ್ಲೆಯ ಕಕ್ಕನಾಡ್ ಕಸ್ಟಮ್ಸ್ ಕ್ವಾರ್ಟರ್‌ಸಿನಲ್ಲಿ ಕೇಂದ್ರ ಅಬಕಾರಿ ಮತ್ತು ಜಿಎಸ್‌ಟಿ ಇಲಾಖೆಯ ಹೆಚ್ಚುವರಿ ಆಯುಕ್ತ ಮನೀಶ್ ವಿಜಯ್, ಅವರ ತಾಯಿ ಮತ್ತು ಸಹೋದರಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.

ಮೂಲತಃ ಜಾರ್ಖಂಡ್‌ನವರಾದ ಮನೀಶ್ ವಿಜಯ್ ಕೆಲ ದಿನಗಳ ರಜೆ ಪಡೆದುಕೊಂಡಿದ್ದರು. ನಾಲ್ಕು ದಿನಗಳ ನಂತರವೂ ಕಚೇರಿಗೆ ಹಾಜರಾಗದೆ ಇದ್ದ ಹಿನ್ನೆಲೆಯಲ್ಲಿ ಅವರ ಸಹೋದ್ಯೋಗಿಗಳು ಮನೆಗೆ ಭೇಟಿ ನೀಡಿದಾಗ, ಒಳಗಿನಿಂದ ಕೆಟ್ಟ ವಾಸನೆ ಬರುತ್ತಿರುವುದು ಗಮನಿಸಿದರು. ತಕ್ಷಣವೇ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಪೊಲೀಸರು ಬಾಗಿಲು ತೆರೆಯುತ್ತಿದ್ದಂತೆ ತಾಯಿ ಮತ್ತು ಇಬ್ಬರು ಮಕ್ಕಳ ದಾರುಣ ಅಂತ್ಯ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇದು ಆತ್ಮಹತ್ಯೆ ಆಗಿರಬಹುದು ಎಂದು ಶಂಕಿಸಲಾಗುತ್ತಿದೆ. ಮನೀಶ್ ಮತ್ತು ಅವರ ಸಹೋದರಿ ಶಾಲಿನಿ ಪ್ರತ್ಯೇಕ ಕೊಠಡಿಗಳಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಾಯಿ ಶಕುಂತಲಾ ಹಾಸಿಗೆಯ ಮೇಲಿದ್ದರು. ತಾಯಿಯ ಶವವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ, ಹೂವುಗಳಿಂದ ಅಲಂಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲು ತಾಯಿಯನ್ನು ಕೊಂದು, ಬಳಿಕ ಮಕ್ಕಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಪೊಲೀಸರು ವಶಕ್ಕೆ ಪಡೆದ ಡೈರಿಯೊಂದರಲ್ಲಿ ಶಾಲಿನಿಯ ವಿದೇಶದಲ್ಲಿರುವ ಸಹೋದರಿಗೆ ಈ ಸುದ್ದಿಯನ್ನು ತಿಳಿಸಬೇಕು ಎಂಬ ಉಲ್ಲೇಖವಿತ್ತು. ಅವರ ಭೇಟಿ ಬಳಿಕ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಘಟನೆಯ ಕುರಿತು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ ಹಾಗೂ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮನೀಶ್ ವಿಜಯ್ ಕಳೆದ ಒಂದೂವರೆ ವರ್ಷದಿಂದ ಕೊಚ್ಚಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಅವರು ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಪ್ರಿವೆಂಟಿವ್ ವಿಭಾಗದಲ್ಲಿ ಕೆಲಸ ಮಾಡಿದ್ದರು.

ಶಾಲಿನಿ 2006ರ ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (ಜೆಪಿಎಸ್‌ಸಿ) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಡೆಪ್ಯೂಟಿ ಕಲೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ ಅವರ ರ‍್ಯಾಂಕ್ ವಿಚಾರವಾಗಿ ವಿವಾದ ಉಂಟಾಗಿ, ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು. 2024ರಲ್ಲಿ ಸಿಬಿಐ ಈ ಪ್ರಕರಣದ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಲು ಮುಂದಾಗಿತ್ತು. ಶಾಲಿನಿ ಈ ಪ್ರಕರಣವನ್ನು ಎದುರಿಸುತ್ತಿದ್ದ ಕಾರಣ ಮನೀಶ್ ತಮ್ಮ ಕೆಲಸದಿಂದ ರಜೆ ಪಡೆದುಕೊಂಡಿದ್ದರು.ಇದನ್ನು ಓದಿ –ರಾಜ್ಯದಲ್ಲಿ ನಂದಿನಿ ಹಾಲಿನ ದರ 5 ರೂ. ಹೆಚ್ಚಳ ಖಚಿತ: ಕೆಎಂಎಫ್ ಅಧ್ಯಕ್ಷರ ಸುಳಿವು

ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!