ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತೆರೆಮೇಲೆ ನೋಡಿ ಖುಷಿ ಪಡುವ ಅಭಿಮಾನಿಗಳಿಗೆ ನೇರವಾಗಿ ನೋಡುವ ಅವಕಾಶ ಸಿಕ್ಕರೆ ಎಷ್ಟು ಸಂತಸ ಆಗಬೇಡ. ಇಂತಹದೊಂದು ಅಪರೂಪದ ಘಟನೆ ಮಡಿಕೇರಿಯಲ್ಲಿ ವರದಿಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ಸ್ನೇಹಿತರ ಜೊತೆ ಮಡಿಕೇರಿಗೆ ಬೈಕ್ ರೈಡ್ ಹೋಗಿರುವ ನಟ ದರ್ಶನ್ ಅಲ್ಲೇ ವಾಸ್ತವ್ಯ ಹೂಡಿದ್ದರು. ಸ್ನೇಹಿತನಿಗೆ ಸೇರಿದ ತೋಟದ ಮನೆಯಲ್ಲಿ ಟೈಂ ಪಾಸ್ ಮಾಡುತ್ತಾ, ಗೆಳೆಯರ ಜೊತೆ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು.
ಇದೀಗ, ಮಡಿಕೇರಿಯಲ್ಲಿ ದಾರಿ ಮಧ್ಯೆ ಸಿಕ್ಕ ಅಭಿಮಾನಿಯೊಬ್ಬರ ಮನೆಗೆ ದರ್ಶನ್ ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ಬೆಂಗಳೂರಿನಿಂದ ಮಡಿಕೇರಿ ಕಡೆ ಹೋಗುವ ವೇಳೆ ಸೋಮವಾರಪೇಟೆಯ ತಾಲ್ಲೂಕಿನ ಬೈಚನಹಳ್ಳಿ ಬಳಿ ಹೆದ್ದಾರಿಯಲ್ಲಿ ನಟ ದರ್ಶನ್ ವಿಶ್ರಾಂತಿಗೆಂದು ಬ್ರೇಕ್ ಹಾಕಿದ್ದಾರೆ. ಈ ವೇಳೆ ದರ್ಶನ್ ಅವರನ್ನು ನೋಡಿದ ಅಭಿಮಾನಿಯೊಬ್ಬರು ತೀವ್ರ ಸಂತಸಗೊಂಡು, ನಮ್ಮ ಮನೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ.
ಅಭಿಮಾನಿಯ ಆಹ್ವಾನವನ್ನು ತಿರಸ್ಕರಿಸದ ದಾಸ ,ಸರಿ ಹೋಗೋಣ ಅಂತ ಮನೆಗೆ ಹೋಗಿದ್ದಾರೆ. ಮನೆಯಲ್ಲಿದ್ದ ವೃದ್ದ ದಂಪತಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೂಗಿದ ತಕ್ಷಣ ಮನೆಗೆ ಬಂದ ಸ್ಟಾರ್ ನಟನ ಸರಳತೆ ಕಂಡು ಅಭಿಮಾನಿ ಹಾಗೂ ಕುಟುಂಬದ ಸದಸ್ಯರು ಖುಷಿಯಾಗಿದ್ದಾರೆ.
ದರ್ಶನ್ ಅವರ ಬೈಕ್ ರೈಡ್ಗೆ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಹಾಸ್ಯ ನಟ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ಪ್ರಣಾಮ್ ದೇವರಾಜ್, ಪನ್ನಾಗಭರಣ, ಯಶಸ್ ಸೂರ್ಯ ಸೇರಿದಂತೆ ಗಜಪಡೆ ಸ್ನೇಹಿತರ ಬಳಗ ಸಾಥ್ ನೀಡಿದೆ.