February 22, 2026

Newsnap Kannada

The World at your finger tips!

101 temple

ಸೆ.22 ರಂದು ಮೈಸೂರಿನ 101 ಗಣಪತಿ ದೇಗುಲ ತೆರವಿಗೆ ಜಿಲ್ಲಾಡಳಿತ ನೋಟಿಸ್

Spread the love

ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೃದಯ ಭಾಗದಲ್ಲಿರುವ ಅಗ್ರಹಾರ ಸರ್ಕಲ್ ಸಮೀಪದ ಹೆಸರುವಾಸಿ ದೇಗುಲ 101 ಗಣಪತಿ ದೇವಸ್ಥಾನವನ್ನು ಸೆಪ್ಟೆಂಬರ್ 22 ರಂದು ತೆರವುಗೊಳಿಸಲು ಜಿಲ್ಲಾಡಳಿತ ನೋಟಿಸ್ ನೀಡಿರುವುದಕ್ಕೆ ಸಂಸದ ಪ್ರತಾಪ್ ಸಿಂಹ ಕೆರಳಿ ಕೆಂಡವಾಗಿದ್ದಾರೆ.


ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ. ಜಿಲ್ಲಾಡಳಿತದವರು ಕಳ್ಳರು ಬರುವ ಹಾಗೆ ಬೆಳಗಿನ ಜಾವದ ಸಮಯದಲ್ಲಿ ಬಂದು ದೇಗುಲುಗಳನ್ನು ಒಡೆದು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

101 ganapa


ಬರೀ ದೇವಸ್ಥಾನ ತೆರವು ಯಾಕೆ ಎಂದು ಪ್ರಶ್ನಿಸಿರುವ ಸಿಂಹ, ಮಸೀದಿ, ಚರ್ಚ್ಗಳು ನಿಮ್ಮ(ಜಿಲ್ಲಾಡಳಿತ)ಕಣ್ಣಿಗೆ ಕಾಣುವುದಿಲ್ಲವೇ ಎಂದು ಘರ್ಜಿಸಿದ್ದಾರೆ. ದೇವಾಲಯಗಳಿಗೆ ಎದುರಾಗಿರುವ ಕಂಟಕ ನಿವಾರಣೆಗೆ ಗಣಪತಿಯನ್ನು ಬೇಡಿದ್ದೇನೆ ಎಂದು ಹೇಳಿದರು.
101 ಗಣಪತಿ ದೇವಸ್ಥಾನದ ಬಗ್ಗೆ ಅವರು ಮಾತನಾಡಿ, ಈ ದೇವಸ್ಥಾನದ ಬಗ್ಗೆ ಭಕ್ತರಿಗೆ ಬಹಳವಾದ ನಂಬಿಕೆ ಇದೆ. ಹಲವರು ಈಡುಗಂಟು ಇಟ್ಟಿದ್ದಾರೆ. 1955 ರಲ್ಲಿ ಈ ದೇಗುಲ ಆರಂಭವಾಗಿದೆ ಎಂದು ವಿವರಿಸಿದರು.

60 ಕ್ಕಿಂತ ಹೆಚ್ಚು ದೇಗುಲಗಳ ನೆಲಸಮಕ್ಕೆ ಜಿಲ್ಲಾಡಳಿತ ಪಟ್ಟಿ ಮಾಡಿದೆ. ಇದಕ್ಕೆ ಜನಸಾಮಾನ್ಯರಿಂದ ವಿರೋಧ ವ್ಯಕ್ತವಾಗಿದೆ. ಜನರ ಜತೆ ಚರ್ಚೆ ನಡೆಸದೆ ದೇವಸ್ಥಾನಗಳನ್ನು ನೆಲಕ್ಕುರುಳಿಸುವ ಕ್ರಮ ಸರಿಯಲ್ಲ ಎಂದರು.

2009 ರ ಸುಪ್ರೀಂಕೋರ್ಟ್ ಆದೇಶವನ್ನು ಪ್ರತಾಪ್‌ಸಿಂಹ ಓದಿಹೇಳಿದರು. 2009 ಕ್ಕಿಂತ ಮುಂಚೆ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರಗಳು ನಿರ್ಮಾಣವಾಗಿದ್ದರೆ ಏನು ಮಾಡಬೇಕೆಂದು ವಿವರಿಸಲಾಗಿದೆ. 2009 ರಿಂದ ಇದುವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರ ಕಟ್ಟಲು ಅವಕಾಶ ನೀಡಿಲ್ವಾ ಎಂದು ಅವರು ಜಿಲ್ಲಾಡಳಿತವನ್ನು ಪ್ರಶ್ನಿಸಿದರು.


ಗಣಪತಿ ಹಬ್ಬ ನಡೆದು 12 ದಿನಕ್ಕೆ ಸರಿಯಾಗಿ 101 ಗಣಪತಿ ದೇಗುಲ ತೆರವಿಗೆ ನೋಟಿಸ್ ನೀಡಿರುವುದು ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಬಹುದೆಂಬ ಆತಂಕವಂತೂ ಇದ್ದೇ ಇದೆ.

error: Content is protected !!